ಔರಾದ(ಬಿ) ಪಟ್ಟಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದ್ದು, ಕೂಡಲೇ ಉಪನ್ಯಾಸಕರನ್ನು ಒದಗಿಸಬೇಕೆಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ಅವರಲ್ಲಿ ಒತ್ತಾಯಿಸಿದರು.
ಬೆಂಗಳೂರಿನ ವಿಧಾನಸಭೆಯಲ್ಲಿ ಬುಧವಾರ ಸಚಿವರನ್ನು ಭೇಟಿ ಮಾಡಿದ ಅವರು, ನನ್ನ ಮತಕ್ಷೇತ್ರವಾದ ಔರಾದ(ಬಿ) ತಾಲ್ಲೂಕು ಡಾ.ನಂಜುAಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ತಾಲ್ಲೂಕು ಕೇಂದ್ರವಾದ ಔರಾದ್(ಬಿ)ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಡೆಯುತ್ತಿದ್ದು, ಉಪನ್ಯಾಸಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ಸಮಸ್ಯೆಯಾಗುತಿದೆ. ಒಟ್ಟು 27 ಅಧ್ಯಾಪಕರ ಪೈಕಿ ಒಬ್ಬರು ಮಾತ್ರ ಸೇವೆ ಸಲ್ಲಿಸುತ್ತಿದ್ದು, 26 ಹುದ್ದೆಗಳು ಖಾಲಿಯಿವೆ. ಇರುವ ಒಬ್ಬ ಪ್ರಾಧ್ಯಾಪಕರು ವರ್ಗಾವಣೆಯಾದರೆ ಪಾಲಿಟೆಕ್ನಿಕ್ ಕಾಲೇಜು ಅನಾಥವಾಗಲಿದೆ. ಉಪನ್ಯಾಸಕರ ಕೊರತೆಯ ಕಾರಣ ಕ್ಷೇತ್ರದ ಮಕ್ಕಳು ಕಾಲೇಜು ಇದ್ದರೂ ಕೂಡ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕಾಗಿ ದೂರದ ಬೀದರ ಹಾಗೂ ಮತ್ತಿತರೆ ಕಡೆಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಣೆ ನೀಡಿದರು.
ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಕಲ್ಪಿಸಿ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗಬೇಕೆಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಕಾಲೇಜನ್ನು ತಂದಿದ್ದೇನೆ. ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ. ಮಕ್ಕಳ ಸಂಖ್ಯೆಯೂ ಉತ್ತಮ ರೀತಿಯಲ್ಲಿದೆ. ಆದರೆ ಖಾಯಂ ಶಿಕ್ಷಕರಿಲ್ಲದೇ ಅತಿಥಿ ಶಿಕ್ಷಕರಿಂದ ಬೋಧನೆ ಮಾಡಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕಾಲೇಜು ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ ಎಂದು ವಿಷಯದ ಮನವರಿಕೆ ಮಾಡಿಕೊಟ್ಟರು. ನನ್ನ ಮತಕ್ಷೇತ್ರದ ಬಡ ವಿದ್ಯಾರ್ಥಿಗಳ ಹಿತಧೃಷ್ಟಿಯಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೇ ಖಾಯಂ ಬೋಧಕರನ್ನು ಒದಗಿಸಬೇಕೆಂದು ಕೋರಿದರು.
*ಸಿಪಿ ವಿಭಾಗಕ್ಕೆ ಹುದ್ದೆಗಳ ಮಂಜೂರಾತಿಗೆ ಮನವಿ:* ಔರಾದ(ಬಿ) ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಕಳೆದೊಂದು ವರ್ಷದಿಂದ ಕಮರ್ಷಿಯಲ್ ಪ್ರಾö್ಯಕ್ಟಿಕ್ ವಿಭಾಗವನ್ನು ತೆರೆಯಲಾಗಿದೆ. ಈ ವಿಭಾಗಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಹೊಸ ಹುದ್ದೆಗಳನ್ನು ಮಂಜೂರು ಮಾಡಿ ಖಾಯಂ ಸಿಬ್ಬಂದಿಯನ್ನು ಒದಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದರು.
ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ರಾಜ್ಯದೆಲ್ಲೆಡೆ ಬೋಧಕ ಸಿಬ್ಬಂದಿಯ ಕೊರತೆಯಿದೆ. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ. ಹಾಗೆಯೇ ಕಮರ್ಷಿಯಲ್ ಪ್ರಾö್ಯಕ್ಟಿಸ್ ವಿಭಾಗಕ್ಕೆ ಹುದ್ದೆಗಳ ಮಂಜೂರಾತಿಗೂ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ