ಹಾಸನ: ಈ ವರ್ಷ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಮುಂಗಾರು ಪೂರ್ವ ಭಾರೀ ಮಳೆ ಕಾಫಿ ಬೆಳೆಗಾರರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಅವಧಿಗೆ ಮುನ್ನವೇ ಆರ್ಭಟಿಸಿದ ಮುಂಗಾರು, ಮೇ ಅಂತ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದು ಫಸಲು ಕಟ್ಟೋ ವೇಳೆಯಲ್ಲೇ ಕೊಳೆ ರೋಗ ಅಂಟಿ ಕಾಫಿಗೆ ಕಂಟಕ ಎದುರಾಗಿದೆ.
ಕಾಳುಮೆಣಸು, ಅಡಿಕೆ ಸೇರಿ ಹಲವು ಬೆಳೆಗಳಿಗೆ ಮಳೆ ಆಘಾತ ತಂದಿದೆ. ಇನ್ನು ಕಾಫಿಗೆ ಉತ್ತಮ ಬೆಳೆ ಇರುವ ಸಂದರ್ಭದಲ್ಲೇ ಮಳೆಯಿಂದ ಹಾನಿಯಾಗುವ ಆತಂಕ ಎದುರಾಗಿರುವುದು ಬೆಳೆಗಾರರನ್ನು ಕಂಗೆಡಿಸಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ವರ್ಷ ಅವಧಿಗೂ ಮುನ್ನವೇ ಸುರಿದ ಮುಂಗಾರು ಮಳೆ ದೊಡ್ಡ ಅನಾಹುತ ಸೃಷ್ಟಿಸಿದೆ. ಸತತ 10 ದಿನಗಳು ಸುರಿದ ಭಾರೀ ಮಳೆಗೆ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು ತಾಲ್ಲೂಕಿನ ಕಾಫಿ ತೋಟಗಳಲ್ಲಿ ಕಾಫಿ ಫಸಲು ತೆನೆಕಟ್ಟುವ ವೇಳೆಯಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ಹೆಚ್ಚಾದ ಶೀತದಿಂದ ಗೊಂಚಲು ಕೊಳೆ ರೋಗದಿಂದ ಕಾಫಿ ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ.
ಕಳೆದ ವರ್ಷ ಸುದೀರ್ಘ ಅವಧಿಗೆ ಮಳೆ ಸುರಿದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಕಾಫಿ ಬೆಳೆಗೆ ದೊಡ್ಡ ಆಘಾತವಾಗಿ ಶೇಕಡ 50 ರಷ್ಟು ಬೆಲೆ ನಷ್ಟವಾಗಿತ್ತು. ಆದರೆ ಉತ್ತಮ ಬೆಲೆಯಿಂದ ಕಾಫಿ ಬೆಳೆಗಾರರು ಕೊಂಚ ನಿರಾಳವಾಗಿದ್ದರು. ಈ ವರ್ಷ ಮಾತ್ರ ಮೇ ಅಂತ್ಯದಲ್ಲಿ ಅಬ್ಬರಿಸಿದ ಮುಂಗಾರು ಪೂರ್ವ ಮಳೆಯಿಂದ ಬೆಳೆಗಾರರು ಆಘಾತಗೊಂಡಿದ್ದಾರೆ.