ಚಿಂಚೋಳಿ ಶಾಸಕರೇ ತಾವು ಮೊದಲು ಕೆಡಿಪಿ ಸಭೆ ಮಾಡಿ ಪ್ರಿಯಾಂಕ್ ಖರ್ಗೆ ಕುರಿತ ಅವಿನಾಶ್ ಜಾಧವ ಹೇಳಿಕೆಗೆ : ಶರಣು ಪಾಟೀಲ ಮೋತಕಪಲ್ಲಿ ತಿರುಗೇಟು

ಚಿಂಚೋಳಿಯಲ್ಲಿ ಕೊನೆಯ ತ್ರೈಮಾಸಿಕ ಕೆಡಿಪಿ ಸಭೆ 2024ರ ಜುಲೈ 12 ರಂದು ಜರುಗಿದ್ದು ಶಾಸಕರು ಕೂಡಲೇ ಅಭಿವೃದ್ಧಿ ಕುರಿತ ತ್ರೈಮಾಸಿಕ ಕೆಡಿಪಿ ಸಭೆ ಕರೆದು ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಮಾತನಾಡಬೇಕು.
ಎರಡನೇ ಬಾರಿ ಚಿಂಚೋಳಿ ಶಾಸಕರಾಗಿ ಆಯ್ಕೆಯಾದ ಡಾ. ಅವಿನಾಶ ಜಾಧವ ಅವರು ತಮ್ಮ ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆ ಏನು ? ಚಿಂಚೋಳಿಗೆ ತಮ್ಮ ಕೊಡುಗೆ ಏನು ಎನ್ನುವದು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು.ಸರಕಾರದಿಂದ ಅನುದಾನ ತರುವದು ಇರಲಿ 2013ರ ಸಿದ್ರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಕೊಟ್ಟ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳುವದು ತಮ್ಮಿಂದ ಆಗಿಲ್ಲ. ಚಿಂಚೋಳಿಗೆ ಕಾಂಗ್ರೆಸ್ ಸರಕಾರ ಕೊಟ್ಟ ಅನುದಾನವನ್ನು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆ ಮಾಡಿದ್ದೀರಿ, ಇದಕ್ಕೆ ಜೀವಂತ ಉದಾಹರಣೆ ತಾಲೂಕ ಒಳಾಂಗಣ ಕ್ರೀಡಾಂಗಣ! ಅಷ್ಟೇ ಅಲ್ಲ ನೂತನ ತಹಸೀಲ್ ಕಚೇರಿಗೆ ಅನುದಾನ ಕೊಟ್ಟಿದ್ದು ಕಾಂಗ್ರೆಸ್ ಸರಕಾರ, ನಿಮಗೆ ಅದಕ್ಕೆ ಪೀಠೋಪಕರಣ ತರಲಿಕ್ಕೆ ಆಗಿಲ್ಲ, ಇವತ್ತಿಗೂ ಹಾಳು ಬಿದ್ದಿದೆ ಮತ್ತೆ ರಿಪೇರಿ ಕಾರ್ಯ ಇಡುವ ಹಂತಕ್ಕೆ ತಲುಪಿದೆ. ಶಾಪಿಂಗ್ ಮಾಲಗೆ ಕೊಟ್ಟ ಅನುದಾನದ ಸದ್ಬಳಕೆಯ ಕಥೆ ಎಲ್ಲಿಗೆ ಬಂದಿದೆ ಅನ್ನುವದು ಸ್ಥಳೀಯ ಜನ ನೋಡ್ತಾ ಇದ್ದಾರೆ, ಬೋಗಸ್ ಅಡಿಗಲ್ಲುಗಳ ಪಟ್ಟಿ ಹಣಮಂತನ ಬಾಲದಂತೆ ಬೆಳೆದಿದ್ದೆ ಬೆಳೆದಿದ್ದು, ಚುನಾವಣೆ ಗಿಮಿಕ್ ಗಾಗಿ ಜನರನ್ನು ಮರಳು ಮಾಡಲು ಮಾಡಿದ ಅಡಿಗಲ್ಲುಗಳ ಬಗ್ಗೆ ಒಂದು ಸಾರಿ ವಿಚಾರ ಮಾಡುವದು ಒಳಿತು. ತಮ್ಮದೇ ಪಕ್ಷದ ಮುಖಂಡರು ಶಾಸಕರನ್ನು ಹುಡುಕಿ ಕೊಡಿ ಎಂದು ಮಾಧ್ಯಮಗಳಲ್ಲಿ ಕೇಳುವಾಗ ಯಾವ ಮುಖ ಇಟ್ಕೊಂಡು ಸಚಿವ ಪ್ರಿಯಾಂಕ ಖರ್ಗೆ ಅವರ ಬಗ್ಗೆ ಹಗುರವಾಗಿ ಮಾತು ಆಡ್ತೀರಾ, ಖರ್ಗೆ ಅವರು ಕೆಡಿಪಿ ಸಭೆ ಮಾಡಿಲ್ಲ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸ್ತಾರೆ ಅಂತ ಹೇಳುವ ನೀವು ಬೆಂಗಳೂರಿನಲ್ಲಿ ಸಭೆ ಮಾಡುವದು ಒಂದು ದೊಡ್ಡ ಅಪರಾಧ ಅನ್ನುವ ರೀತಿ ಹೇಳ್ತಿದ್ದೀರಿ, ತಾವು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಮೊದಲು ನೀವು ಎಷ್ಟು ದಿನ ಚಿಂಚೋಳಿಯಲ್ಲಿ ವಾಸ್ತವ್ಯ ಮಾಡಿದ್ದೀರಿ ಅನ್ನುವದನ್ನು ನೆನಪು ಮಾಡಿಕೊಳ್ಳಿ. ತಾಲೂಕಿನ ಜನತೆ ಸಮಸ್ಯೆ ಹೇಳಲು ತಮ್ಮ ತಮ್ಮ ನಿವಾಸ ಗುಲ್ಬರ್ಗ ಹಾಗೂ ಬೆಂಗಳೂರಿಗೆ ಬರುವ ಪರಿಸ್ಥಿತಿ ಇದ್ದು ತಾವು ಚಿಂಚೋಳಿಯಲ್ಲಿ ಕೆಡಿಪಿ ಸಭೆ ನಡೆಸಿ 11ತಿಂಗಳು ಆಯ್ತು ಅದನ್ನು ನೆನಪಿಸಿಕೊಳ್ಳಿ, ಕೆಡಿಪಿ ಸಭೆ ಎಷ್ಟು ದಿನಕ್ಕೊಮ್ಮೆ ಮಾಡಬೇಕು ತಾವು ಶಾಸಕರಾದ ಮೇಲೆ ಎಷ್ಟು ಕೆಡಿಪಿ ಸಭೆ ಮಾಡಿದ್ದೀರಿ ಅನ್ನುವ ವಿಚಾರ ಜನೆತೆಗೆ ಮೊದಲು ತಿಳಿಸಿ. ಸಚಿವ ಪ್ರಿಯಾಂಕ ಖರ್ಗೆ ಅವರ ಇಲಾಖೆಗಳು ಯಾವುವು ಆ ಇಲಾಖೆಗಳ ವ್ಯಾಪ್ತಿ ಆಳ ಅಗಲ ಎಷ್ಟಿದೆ ಅನ್ನುವದು ಮೊದಲು ತಿಳಿಯುವದು ಸೂಕ್ತ, ಸುಮಾರು ಎಪ್ಪತ್ತಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ಖರ್ಗೆ ಅವರ ಇಲಾಖೆಗಳಡಿ ಕೆಲ್ಸಾ ಮಾಡ್ತಾರೆ ಸರಕಾರ ಜನಪರವಾಗಿ ಕೆಲಸ ಮಾಡಬೇಕಾದರೆ ಸಚಿವರು ಹೇಗೆ ದುಡಿಯಬೇಕು ಎನ್ನುವುದನ್ನು ಪ್ರಿಯಾಂಕ ಖರ್ಗೆ ಅವರನ್ನು ನೋಡಿ ಕಲಿಯಬೇಕು. ಯಾರನ್ನೋ ಖುಷಿ ಪಡಿಸಲಿಕ್ಕೆ ಶಾಸಕರು ಬಲಿಪಶು ಆಗಿ ಈ ರೀತಿ ಹೇಳಿಕೆ ಕೊಡುವದು ಸರಿಯಲ್ಲ. ಸ್ವಂತ ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಇರುವ ಯಾವ ಶಾಸಕರು ತಮ್ಮದೇ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಹೀಗೆ ನಿರಾಧಾರ ಅಸಂಬದ್ಧ ಹೇಳಿಕೆ ಕೊಡಲ್ಲ. ಸಚಿವ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಮೊದಲ ಜನ ಸ್ಪಂದನ ಕಾರ್ಯಕ್ರಮ ನಡೆಸಿದ್ದು ಚಿಂಚೋಳಿಯಲ್ಲಿ ಅವರು ಯಾವತ್ತೂ ಚಿಂಚೋಳಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ, ಚಿಂಚೋಳಿ ಶಾಸಕರು ರಾಜಕೀಯ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡುವದು ಸೂಕ್ತ ಕೂಡಲೇ ಕೆಡಿಪಿ ಸಭೆ ಕರೆದು ಕ್ಷೇತ್ರದ ಆಗು ಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸಕಾರಾತ್ಮಕ ದಾರಿಯಲ್ಲಿ ಸರಕಾರದೊಂದಿಗೆ ಸ್ಪಂದಿಸಲು ಒತ್ತಾಯಿಸಿದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!