ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಪ್ರಧಾನಿ ಮೋದಿ ಅವರ ಮುಂದೆ ಕುಳಿತು ಮಾತನಾಡುವ ಧೈರ್ಯವಿಲ್ಲ – ಸಂಸದ ಜಿಗಜಿಣಗಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ನೀತಿ ಆಯೋಗದ ಸಭೆಯಲ್ಲಿ ಬಾಗವಹಿಸದೆ ರಾಜ್ಯದ ೭ ಕೋಟಿ ಜನರ ಹಿತಾಸಕ್ತಿಗೆ ಕೊಳ್ಳಿ ಇಟ್ಟಿದ್ದಾರೆ,

ಮಾಧ್ಯಮಗಳ ಮುಂದೆ ಬಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಅವರಿಗೆ ಪ್ರಧಾನಿ ಮೋದಿ ಅವರ ಮುಂದೆ ಕುಳಿತು ಮಾತನಾಡುವ ಧೈರ್ಯವಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಣಕಾಸು ಆಯೋಗದ ಸಭೆಗೆ ಗೈರು ಹಾಜರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕ್ರಮವನ್ನು ವ್ಯಾಪಕವಾಗಿ ವಿರೋಧಿಸಿರುವ ಅವರು, ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಸಲ್ಲದು, ೧೫ ನೇ ಹಣಕಾಸು ಆಯೋಗದ ಸಭೆ ಪಕ್ಷದ ಸಭೆಯಲ್ಲ, ಅದು ಜನರ ಅಭಿವೃದ್ಧಿಗಾಗಿ ಸರ್ಕಾರಿ ಹಂತದಲ್ಲಿ ನಡೆಯುವ ಸಭೆ, ಇಂತಹ ಸಭೆಗೂ ಸಹ ರಾಜಕೀಯ ಕಾರಣಕ್ಕಾಗಿ ಗೈರು ಹಾಜರಾಗಿ ಉಳಿದರೆ ಏನರ್ಥ ಎಂದು ಜಿಗಜಿಣಗಿ ಪ್ರಶ್ನಿಸಿದ್ದಾರೆ.

ರಾಜ್ಯಗಳ ಅಭಿವೃದ್ದಿಯ ದೃಷ್ಟಿಯಿಂದ ನೀತಿ ಆಯೋಗದ ಸಭೆ ಅತ್ಯಂತ ಮಹತ್ವದ್ದಾಗಿರುತ್ತದೆ, ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗಿರುವ ಹಲವು ಸಮಸ್ಯೆಗಳನ್ನು ನೀತಿ ಆಯೋಗದ ಮುಂದೆ ಪ್ರಸ್ತಾಪಿಸುವುದು ಅಗತ್ಯವಾಗಿರುತ್ತದೆ, ಇದು ಮುಖ್ಯಮಂತ್ರಿಯಾದವರ ಕರ್ತವ್ಯ ಹಾಗೂ ಜವಾಬ್ದಾರಿ ಸಹ ಹೌದು, ಆದರೆ ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಜವಾಬ್ದಾರಿಯಿಂದಲೂ ನುಣುಚಿಕೊಂಡಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮೊದಲಾದವರು ನೀತಿ ಆಯೋಗದ ಸಭೆಗಳಿಗೆ ಹಾಜರಾಗಿ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು, ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜಕೀಯ ಉದ್ದೇಶದಿಂದ ಸಭೆಯಲ್ಲಿ ಭಾಗಿಯಾಗದೇ ರಾಜ್ಯದ ಜನರ ಹಿತಾಸಕ್ತಿಗೆ ಧಕ್ಕೆ ತಂದಿದ್ದು ಕರ್ನಾಟಕದ ಪರವಾಗಿ ಮಾತನಾಡಲು ಇದ್ದ ಅವರಾಶವನ್ನು ಬೇಕಂತಲೇ ಕೈಚೆಲ್ಲಿದ್ದಾರೆ, ಈ ಎಲ್ಲ ವಿಷಯಗಳನ್ನು ಅವಲೋಕಿಸಿದರೆ ಪ್ರಧಾನಿ ಅವರ ಮುಂದೆ ಕುಳಿತು ಮಾತನಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧೈರ್ಯವಿಲ್ಲವೆಂದು ಸಾಬೀತಾಗಿದೆ ಎಂದು ವಿಜಯಪುರ ಸಂಸದರಾದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ವರದಿ : ಅಜೀಜ ಪಠಾಣ.

error: Content is protected !!