ಸರ್ಕಾರಿ ಗೋಶಾಲೆಗೆ ಸಂಸದ ಸಾಗರ ಖಂಡ್ರೆ ಭೇಟಿ ಪರಿಶೀಲನೆ  ಹಸುಗಳನ್ನು ತಕ್ಷಣ ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚನೆ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಸಾಗರ ಖಂಡ್ರೆ ಅವರು ಇಂದು ಹೆಡಗಾಪುರದ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿ, ಗೋಶಾಲೆಯ ಸ್ಥಿತಿಯನ್ನು ಪರಿಶೀಲಿಸಿದರು.

 

ಗೋಶಾಲೆಯಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು, ಇದರ ಸಮರ್ಪಕ ಬಳಕೆಯನ್ನು ಖಚಿತಪಡಿಸಲು, ಬೀದಿ ಹಸುಗಳನ್ನು ತಕ್ಷಣವೇ ಗೋಶಾಲೆಗೆ ಸ್ಥಳಾಂತರಿಸಲು ಪಶುವೈದ್ಯಾಧಿಕಾರಿಗಳಿಗೆ ಅವರು ಸೂಚಿಸಿದರು.

 

ಸಂಸದ ಸಾಗರ ಖಂಡ್ರೆ ಅವರು, “ನಗರ ಪ್ರದೇಶಗಳಲ್ಲಿ ಗೋವುಗಳಿಗೆ ಮೇಯಲು ಸ್ಥಳಗಳಿಲ್ಲದ ಕಾರಣ, ಬೀದಿ ಹಸುಗಳು ರಸ್ತೆಗೆ ಬರುತ್ತವೆ, ಇದರಿಂದ ಅಪಘಾತಗಳಿಗೆ ಕಾರಣವಾಗಬಹುದು,” ಎಂದು ಅಭಿಪ್ರಾಯಪಟ್ಟರು. ಬೀದಿ ಹಸುಗಳ ಆರೈಕೆಯನ್ನು ಪೂರೈಸಬೇಕಾಗಿದ್ದು, ಬೀದಿ ಹಸುಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರಿಯಾದ ವ್ಯವಸ್ಥೆ ಮಾಡಬೇಕೆಂದು ಅವರು ತಿಳಿಸಿದರು. ಜೊತೆಗೆ ಗೋಶಾಲೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಪ್ರಾಣಿಗಳಿಗೆ ಉತ್ತಮ ಆರೈಕೆ ಒದಗಿಸಲು ಸೂಚಿಸಿದರು.