ಗ್ರಾ.ಪಂ ನೌಕರರ, ಕಾರ್ಮಿಕರ, ಅಧ್ಯಕ್ಷರ, ಸದಸ್ಯರ ಬೇಡಿಕೆಗಳನ್ನು ಕೂಡಲೇ ಈಡೇರಿಸಿ: ಬಂಡೆಪ್ಪ ಖಾಶೆಂಪುರ್

ಬೀದರ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ, ಕಾರ್ಮಿಕರ ಗ್ರಾಮ ಪಂಚಾಯತಿ ಅಧ್ಯಕ್ಷರ, ಸದಸ್ಯರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ಬೀದರ್ ನಗರದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಕಳೆದ ಕೆಲ ದಿನಗಳಿಂದ ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತಿ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಗಳ ನೇತೃತ್ವದಲ್ಲಿ ಆರ್.ಡಿ.ಪಿ.ಆರ್ ಕುಟುಂಬದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟ’ದ ಸ್ಥಳಕ್ಕೆ ಗುರುವಾರ ಭೇಟಿ ನೀಡಿ, ಹೋರಾಟಗಾರರ ಬೇಡಿಕೆಗಳ ಮಾಹಿತಿ ಪಡೆದು ಅವರು ಮಾತನಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳು, ಕಂಪ್ಯೂಟರ್ ಆಪರೇಟರ್ ಗಳು, ವಾಟರ್ ಮ್ಯಾನ್ ಗಳು, ಸ್ವಚ್ಚತಾ ಕರ್ಮಿಗಳು ಸೇರಿದಂತೆ ಎಲ್ಲರೂ ಸೇರಿ ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನು ಇಟ್ಟಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಈಗಿನ ಸರ್ಕಾರ ಐದು ಗ್ಯಾರಂಟಿಗಳನ್ನು ಕೊಟ್ಟು ಆಡಳಿತ ನಡೆಸುತ್ತಿರುವುದನ್ನು ನೋಡಿದರೆ, ಈಗ ಹೋರಾಟ ನಡೆಸುತ್ತಿರುವ ನಿಮ್ಮ ಬೇಡಿಕೆಗಳು ಆ ಗ್ಯಾರಂಟಿಗಳ ನಾಲ್ಕಾಣೆ ಭಾಗದಷ್ಟು ಕೂಡ ಅಲ್ಲ. ಅಷ್ಟೊಂದು ದೊಡ್ಡಮಟ್ಟದ ಬೇಡಿಕಗಳು ಕೂಡ ನಿಮ್ಮ ಬೇಡಿಕೆಗಳು ಅಲ್ಲ.

ಇಲ್ಲಿ ನಾನು ರಾಜಕೀಯ ಭಾಷಣ ಮಾಡಲು ಬಂದಿಲ್ಲ. ರಾಜ್ಯದಲ್ಲಿ ರೈತರು ಸೇರಿದಂತೆ ಯಾವ್ಯಾವ ವರ್ಗ, ಯಾವ್ಯಾವ ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಮಸ್ಯೆಯಲ್ಲಿ ಇದ್ದಾರೆ. ಅವರ ಸಮಸ್ಯೆಗಳನ್ನು ಹೇಗೆ ಬಗೆಹರಿಸಲು ಪ್ರಯತ್ನಿಸಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕಾಗಿತ್ತು. ಆದರೇ ಈ ಸರ್ಕಾರ ಮೂಡಾ ಕೇಸ್, ಆ ಕೇಸ್, ಈ ಕೆಸ್ ಅಂತ ಕೇಸ್ ಗಳಲ್ಲೇ ಬ್ಯೂಸಿ ಆಗಿದೆ. ನೌಕರರ ಸಮಸ್ಯೆಗಳನ್ನು ಆಲಿಸಲು ಇವರಿಗೆ ಸಮಯವಿಲ್ಲ.

ಯಾರು ಏನೇ ಟೀಕೆ ಮಾಡಿದ್ರು, ಸರ್ಕಾರ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕು. ಈಗಿನ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಬಹಳಷ್ಟು ಇಂಟಲಿಜೆಂಟ್ ಇದ್ದಾರೆ. ಅವರು ಈ ಸಮಸ್ಯೆಗಳನ್ನು ಯಾವತ್ತೋ ಪರಿಹರಿಸಬೇಕಾಗಿತ್ತು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಮಾರ್ಮಿಕವಾಗಿ ನುಡಿದರು.

ಈಗಿನ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರು ಹೋರಾಟಗಾರರೊಂದಿಗೆ ಚರ್ಚಿಸಿ, ಅವರ ಬೇಡಿಕೆಗಳ ಬಗ್ಗೆ ತಿಳಿದುಕೊಂಡು ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ನಾನು ನಮ್ಮ ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರಾಗಿರುವ ಸುರೇಶ್ ಬಾಬುರವರಿಗೆ ನಿಮ್ಮ ಹೋರಾಟದ ಕುರಿತು ಮಾಹಿತಿ ನೀಡುತ್ತೇನೆ. ಮುಂಬರುವ ಅಧಿವೇಶನದಲ್ಲಿ ನಿಮ್ಮ ಪರವಾಗಿ ಧ್ವನಿ ಎತ್ತುವಂತೆ ನಮ್ಮ ಪಕ್ಷದ ಶಾಸಕರುಗಳಿಗೆ ತಿಳಿಸುತ್ತೇನೆ. ನಮ್ಮ ಪಕ್ಷ ನಿಮ್ಮ ಪರವಾಗಿ ಧ್ವನಿ ಎತ್ತುತ್ತದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೋರಾಟಗಾರರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಸವಕಲ್ಯಾಣ ಇಒ ರಮೇಶ್ ಎಂ, ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶಿವಶೆಟ್ಟಿ ಶೀತಾ, ಜಿಲ್ಲಾ ಖಜಾಂಚಿ ದೇವಪ್ಪ ಚಾಂಬಾಳೆ, ಪ್ರಮುಖರಾದ ಶ್ರೀನಿವಾಸ್ ರೆಡ್ಡಿ, ಮೀನಾಕ್ಷಿ ಪಾಟೀಲ್, ಧನರಾಜ್ ವಗ್ಗೆ, ರವಿಕಿರಣ್, ಕನಕರಾಯ ಕನಸಾವಿ, ರಮೇಶ್ ರಾಠೋಡ್, ವಿಜಯಕುಮಾರ್ ಚಾಂಗಲೇರಾ, ದತ್ತಾತ್ರೇಯ ಪೂಜಾರಿ, ಮಲ್ಲಪ್ಪ ಸೋನ್ನದ್, ವೀರಶೆಟ್ಟಿ, ವಿಜಯಕುಮಾರ್, ರಾಮಣ್ಣ ಸೇರಿದಂತೆ ಅನೇಕರಿದ್ದರು.