ಬೆಂಗಳೂರು: ಬಿಬಿಎಂಪಿ ಆಯಸ್ಸು ಇನ್ನು ಕೇವಲ ಮೂರು ದಿನಗಳು ಮಾತ್ರ…, ಮೇ 14, ಯಾಕೆ ಅಂತೀರಾ….ಮೂರು ದಿನಗಳ ನಂತರ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬರಲಿದೆ.
ಹೀಗಾಗಿ ಇಂದಿನಿಂದ ಮೂರು ದಿನಗಳ ನಂತರ ರಾಜಧಾನಿ ಬೆಂಗಳೂರಿನ ಆಡಳಿತದ ಚಿತ್ರಣವೇ ಬದಲಾಗಲಿದೆ. ಬೆಂಗಳೂರಿನ ಪ್ರಾದೇಶಿಕತೆ-ಭೌಗೋಳಿಕತೆಯ ವ್ಯಾಪ್ತಿ-ವಿಸ್ತೀರ್ಣ ಕೂಡ ಹೆಚ್ಚಾಗಲಿದೆ, ಜಂಪರ್ ಮೇ ಬಂಪರ್.
ಬಿಬಿಎಂಪಿ ಮೇ 14ರ ನಂತ್ರ ಅಸ್ತಿತ್ವ ಕಳೆದುಕೊಳ್ಳಲಿದ್ದು, ಹೆಸರು-ಸ್ವರೂಪದಲ್ಲಿ ಭಾರೀ ರೂಪಾಂತರಗೊಂಡು ಬಿಬಿಎಂಪಿ ಎನ್ನುವ ಹೆಸರು ಇತಿಹಾಸದ ಪುಟ ಸೇರಲಿದೆ. ಮೇ15 ರ ನಂತರ ಬಿಬಿಎಂಪಿ ಅಸ್ಥಿತ್ವದಲ್ಲೇ ಇರೊಲ್ಲ..ಅಂದಿನಿಂದಲೇ ಜಿಬಿಎ ಅಸ್ಥಿತ್ವಕ್ಕೆ ಬರಲಿದೆ.
ಈಗಿರುವ ಬಿಬಿಎಂಪಿಯನ್ನು ಮೂರರಿಂದ ಐದು ಪಾಲಿಕೆಗಳನ್ನಾಗಿ ಮಾಡುವ ಸಾಧ್ಯತೆಗಳಿವೆ. ಈ ಮೂರರಿಂದ ಐದು ಪಾಲಿಕೆಗಳ ವ್ಯಾಪ್ತಿ ಗ್ರೇಟರ್ ಬೆಂಗಳೂರಿಗೆ ಬರುವುದರಿಂದ ಜಿಬಿಎಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಆಡಳಿತಾಧಿಕಾರಿ ಅಡಿಯಲ್ಲೇ ಮೂರರಿಂದ ಐದು ಪಾಲಿಕೆಗಳ ಅಡಳಿತ ನಿರ್ವಹಣೆಯಾಗಲಿದೆ. ಮೂರರಿಂದ ಐದು ಪಾಲಿಕೆಗಳಿಗೂ ಆಡಳಿತಾಧಿಕಾರಿಯೇ ಬಾಸ್ ಆಗಿರುತ್ತಾರೆ. ಉಳಿದಂತೆ ಮುಖ್ಯಮಂತ್ರಿ ಜಿಬಿಎ ಅಧ್ಯಕ್ಷರಾಗಿದ್ದಾರೆ, ಡಿಸಿಎಂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ.
ಶಾಸಕರು, ಪಾಲಿಕೆಗಳ ಮೇಯರ್ಗಳು ಹಾಗೂ ಅನೇಕ ಇಲಾಖೆ ಅಧಿಕಾರಿಗಳು, ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ, ಪೊಲೀಸ್ ಕಮಿಷನರ್ ವ್ಯಾಪ್ತಿಯೂ ಜಿಬಿಎ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿವೆ. ಬಿಎಂಆರ್ಸಿಎಲ್, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಭೂಸಾರಿಗೆ, ಬಿಎಂಆರ್ಡಿಎ ಮುಖ್ಯಾಧಿಕಾರಿಗಳು ಪ್ರಾಧಿಕಾರದಲ್ಲಿರುತ್ತಾರೆ.
ಜಿಬಿಎಗೆ ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶ, ಬೊಮ್ಮ ಸಂದ್ರ, ಸರ್ಜಾಪುರ, ಬಾಗಲೂರು, ರಾಜಾನುಕುಂಟೆ, ಹೆಸರಘಟ್ಟ, ದಾಸನಪುರ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಅದೇ ರೀತಿ ಮಾಕಳಿ, ತಾವರೆಕೆರೆ, ಕುಂಬಳಗೋಡು, ಕಗ್ಗಲಿಪುರ, ಹಾರೋಹಳ್ಳಿಯೂ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಬರಬಹುದು ಎಂಬ ನಿರೀಕ್ಷೆಯು ಇದೆ.
ಎಲ್ಲಾ ಪಾಲಿಕೆಗಳ ಹೆಸರು ಬೆಂಗಳೂರು ಎನ್ನುವುದರಿಂದಲೇ ಆರಂಭವಾಗಬಹುದು ಎನ್ನಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಪೂರ್ವ ಹಾಗೂ ಪಶ್ಚಿಮ ನಗರ ಪಾಲಿಕೆ ಎಂಬುದಾಗಿ ಬಿಬಿಎಂಪಿಯನ್ನು ಮೂರರಿಂದ ಐದು ಭಾಗಗಳನ್ನಾಗಿ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂಬುದಾಗಿ ತಿಳಿದುಬಂದಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಗೆ ದಾಸರಹಳ್ಳಿ, ಆರ್ ಆರ್ ನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಯಲಹಂಕ ಮತ್ತು ಹೆಬ್ಬಾಳ ಬರಲಿದೆ ಎಂದು ಅಂದಾಜಿಸಲಾಗಿದೆ.
ಕೆ.ಆರ್ ಪುರಂ, ಮಹಾದೇವಪುರ, ಸಿವಿರಾಮನ್ ನಗರ, ಗಾಂಧೀನಗರ, ರಾಜಾಜಿನಗರ, ಶಿವಾಜಿನಗರ, ಮಲ್ಲೇಶ್ವರಂ, ಸರ್ವಜ್ಞನಗರ, ಪುಲಕೇಶಿನಗರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಪದ್ಮನಾಭನಗರ, ಶಾಂತಿನಗರ, ಬಸವನಗುಡಿ, ಜಯನಗರ, ಬಿಟಿಎಂ ಲೇಔಟ್, ಚಾಮರಾಜಪೇಟೆ, ವಿಜಯನಗರ, ಗೋವಿಂದರಾಜನಗರ, ಚಿಕ್ಕಪೇಟೆ ಹಾಗೂ ಇನ್ನಿತರೇ ಯಾವ ಯಾವ ಪಾಲಿಕೆಗೆ ಹಂಚಿ ಹೋಗುತ್ತದೆಯೋ ಕಾದುನೋಡಬೇಕಿದೆ. ಅಂತೂ ಇಂತು ಜಿಬಿಎ ಉದಯವಾಗಲಿದೆ. ಇದರಿಂದ ಅನುಕೂಲ ಅನಾನುಕೂಲ ಯಾರ್ಯಾರಿಗೆ ಆಗಲಿದೆ ಕಾದುನೋಡಬೇಕಿದೆ.
ವರದಿ : ಮುಬಾರಕ್