ಉತ್ತರ ಪ್ರದೇಶ: ಸುಡು ಬಿಸಿಲಿನ ನಡುವೆ ಪದೇ ಪದೇ ವಿದ್ಯುತ್ ಕಡಿತವಾದರೆ ಜನರ ಪರಿಸ್ಥಿತಿ ಹೇಗಿರಬಹುದು ಒಮ್ಮೆ ಊಹಿಸಿ. ಆದರೆ ಉತ್ತರ ಪ್ರದೇಶದ ಝಾನ್ಸಿಯ ಜನರು ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಕಡಿತದಿಂದ ಹೈರಾಣಾಗಿ ಹೋಗಿದ್ದಾರೆ. ವಿದ್ಯುತ್ ಕಡಿತದ ವಿರುದ್ಧ ಜನರು ಪ್ರತಿಭಟನೆ ಮಾಡಿದರೂ ಏನು ಪ್ರಯೋಜನವಾಗುತ್ತಿಲ್ಲ. ಇದೀಗ ಕುಟುಂಬವೊಂದು ಈ ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಎಟಿಎಂ (ATM) ಬೂತ್ ನಲ್ಲೇ ಆಶ್ರಯ ಪಡೆದುಕೊಂಡಿದೆ.
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿದ್ಯುತ್ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
@IndianTechGuide ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕುಟುಂಬವೊಂದು ಎಟಿಎಂ ಬೂತ್ ನಲ್ಲಿ ಆಶ್ರಯ ಪಡೆದುಕೊಂಡಿರುವುದನ್ನು ಕಾಣಬಹುದು. ಇಲ್ಲಿ ಇಬ್ಬರೂ ಮಹಿಳೆಯರು ತನ್ನ ಇಬ್ಬರೂ ಮಕ್ಕಳೊಂದಿಗೆ ಎಟಿಎಂ ಬೂತ್ ನಲ್ಲಿ ಆಶ್ರಯ ಪಡೆದುಕೊಂಡಿರುವುದನ್ನು ಕಾಣಬಹುದು. ಅದಲ್ಲದೇ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆ, ನಾವು ಇರುವ ಪ್ರದೇಶದಲ್ಲಿ ಒಂದು ತಿಂಗಳಿನಿಂದ ವಿದ್ಯುತ್ ಕಡಿತವಾಗುತ್ತಿದೆ. ಹೀಗಾಗಿ ನಾವು ಎಟಿಎಂ ನಲ್ಲಿ ಆಶ್ರಯ ಪಡೆದುಕೊಂಡಿದ್ದೇವೆ. ನಾವು ಇಲ್ಲಿರುವುದಕ್ಕೆ ಯಾರು ಕೂಡ ಏನು ಹೇಳಿಲ್ಲ. ಯಾರಾದ್ರೂ ಬಂದು ನಮ್ಮನ್ನು ಇಲ್ಲಿ ಇರಬೇಡಿ ಎಂದರೆ ರಸ್ತೆಯ ಮೇಲೆಯೇ ನಾವು ಮಲಗಬೇಕು ಎಂದಿದ್ದಾರೆ.
ಮೇ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋವು ಈಗಾಗಲೇ ನಾಲ್ಕೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ವಿದ್ಯುತ್ ಇಲಾಖೆಯ ವಿರುದ್ಧ ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು, ಉತ್ತರ ಪ್ರದೇಶದಲ್ಲಿ ಭ್ರಷ್ಟ ಇಲಾಖೆ ಯಾವುದಾದರೂ ಇದ್ದರೆ ಅದುವೇ ವಿದ್ಯುತ್ ಇಲಾಖೆ, ಇದನ್ನು ತಕ್ಷಣವೇ ಖಾಸಗಿಕರಣಗೊಳಿಸಬೇಕು ಎಂದಿದ್ದಾರೆ.