ಖಾಸಗಿ ಟ್ರಸ್ಟ್ಗೆ ಸಂಬಂಧಿಸಿದ ವಿಜಯಪುರದ ಐವತ್ತಕ್ಕೂ ಹೆಚ್ಚು ದೇವಾಲಯಗಳ ಆಸ್ತಿಯ ದಾಖಲೆಯಲ್ಲಿ ಮುಜರಾಯಿ ಎಂದು ನಮೂದಿಸಲು ಸರ್ಕಾರ ಮುಂದಾಗಿದ್ದು, ಕೂಡಲೇ ನಿರ್ಣಯವನ್ನು ವಾಪಾಸ್ಸು ಪಡೆಯುವಂತೆ ಒತ್ತಾಯಿಸಿ ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಖಾಸಗಿ ಟ್ರಸ್ಟ್ಗೆ ಸಂಬಂಧಿಸಿದ ವಿಜಯಪುರದ ಐವತ್ತಕ್ಕೂ ಹೆಚ್ಚು ದೇವಾಲಯಗಳ ಆಸ್ತಿಯ ದಾಖಲೆಯಲ್ಲಿ ಮುಜರಾಯಿ ಎಂದು ನಮೂದಿಸಲು ಸರ್ಕಾರ ಮುಂದಾಗಿದ್ದು, ಕೂಡಲೇ ನಿರ್ಣಯವನ್ನು ವಾಪಾಸ್ಸು ಪಡೆಯುವಂತೆ ಒತ್ತಾಯಿಸಿ ಮಾಜಿ ಸಚಿವ ಅಪ್ಫಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಯಿತು.
ಧರಣಿ ನೇತೃತ್ವ ವಹಿಸಿದ್ದ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ವಿಜಯಪುರದ ವಿವಿಧ ಖಾಸಗಿ ಟ್ರಸ್ಟ್, ಸಮಿತಿಗಳಿಗೆ ಸೇರಿದ ದೇವಾಲಯವನ್ನು ಮುಜರಾಯಿ ಇಲಾಖೆಯ ತನ್ನ ಅಧೀನಕ್ಕೆ ಪಡೆದುಕೊಳ್ಳುತ್ತಿರುವುದು ತಿಳಿದು ಬಂದಿದೆ, ದೇವಾಲಯಕ್ಕೆ ಸೇರಿದ ಆಸ್ತಿಗಳನ್ನು ಮುಜರಾಯಿ ಇಲಾಖೆ ಎಂದು ಉತಾರೆಗಳಲ್ಲಿ ನಮೂದಿಸುವ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ, ಇದು ಸರಿಯಾದ ಕ್ರಮವಲ್ಲ ಎಂದರು.
ವಿಜಯಪುರ ಜಿಲ್ಲೆಯ ೫೦ ಕ್ಕೂ ಹೆಚ್ಚು ದೇವಾಲಯಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರರು ಪಾಲಿಕೆ ಆಯುಕ್ತರಿಗೆ ಈ ಖಾಸಗಿ ದೇವಾಲಯಗಳ ಆಸ್ತಿಗಳಲ್ಲಿ `ಹಿಂದು ಧಾರ್ಮಿಕ ದತ್ತಿ ಇಲಾಖೆ’ ಕರ್ನಾಟಕ ಸರಕಾರ ಎಂದು ನಮೂದಿಸಲು ತಿಳಿಸಿರುವದು ಬೆಳಕಿಗೆ ಬಂದಿದೆ,
ಈ ಎಲ್ಲ ದೇವಾಲಯಗಳು ಖಾಸಗಿ ದೇವಾಲಯಗಳು ಎಂದೇ ಪ್ರಸಿದ್ದಿ ಪಡೆದಿವೆ, ಈ ಎಲ್ಲ ದೇವಾಲಯಗಳು ಟ್ರಸ್ಟ್ ಅಡಿಯಲ್ಲಿಯೇ ನಿರ್ವಹಣೆಯಾಗುತ್ತಿವೆ, ಸರ್ಕಾರದಿಂದ ಯಾವೊಂದು ಅನುದಾನ ಪಡೆಯದೇ ನಡೆಯುತ್ತಿವೆ, ಈ ಎಲ್ಲ ವಾಸ್ತವ ಸಂಗತಿ ಗೊತ್ತಿದ್ದರೂ ಸಹ ವೈಯಕ್ತಿಕ ಹಿತಾಸಕ್ತಿಯಿಂದ ದೇವಾಲಯಗಳ ಖಾಸಗಿ ಆಸ್ತಿಗಳನ್ನು ‘ಹಿಂದು ಧಾರ್ಮಿಕ ದತ್ತಿ ಇಲಾಖೆ ಅಡಿ ತಂದು ದೇವಾಲಯಗಳ ಮಾಲಿಕರಿಗೆ ತೊಂದರೆ ನೀಡಿ ಅವರ ಆಸ್ತಿ ಕಬಳಿಸುವ ಷಡ್ಯಂತ್ರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಅಧಿನಿಯಮ ೧೯೯೭ರ ಅಡಿಯಲ್ಲಿ ಯಾವುದೇ ಖಾಸಗಿ ದೇವಾಲಯಗಳು ಹಾಗೂ ಟ್ರಸ್ಟ್ಗಳ ಅಡಿಯಲ್ಲಿ ಪಡೆಯಬೇಕಾದಲ್ಲಿ ಅದಕ್ಕೆ ಯಾವುದಾದರೂ ಸರಕಾರದಿಂದ ಅನುದಾನ ಪಡೆಯುತ್ತಿರಬೇಕು ಹಾಗೂ ಸರಕಾರದ ವತಿಯಿಂದ ಅದರ ದಿನಚರಿಗೆ ಸಹಾಯವಾಗುತ್ತಿರಬೇಕು. ಆದರೆ ವಿಜಯಪುರದಲ್ಲಿ ಉದ್ದೇಶಿತ ದೇವಾಲಯಗಳು ಈ ವ್ಯಾಪ್ತಿಗೆ ಬರುವದಿಲ್ಲ, ಈ ಬಗ್ಗೆ ನ್ಯಾಯಾಲಯ ಸಹ ಸ್ಪಷ್ಟನೆ ನೀಡಿದೆ, ಖಾಸಗಿ ಟ್ರಸ್ಟ್ನ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಆಡಳಿತ ಹಸ್ತಕ್ಷೇಪವಾಗಿದ್ದು ಸರ್ಕಾರ ಕೂಡಲೇ ಈ ಪ್ರಕ್ರಿಯೆ ನಿಲ್ಲಿಸಬೇಕು, ಇಲ್ಲವಾದರೆ ಹೋರಾಟವನ್ನು ಚುರುಕುಗೊಳಿಸಲಾಗುವುದು ಎಂದರು.
ವಿಡಿಎ ಮಾಜಿ ಅಧ್ಯಕ್ಷ ಭೀಮಶಂಕರ ಹದನೂರ, ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ, ಈರಣ್ಣ ಪಟ್ಟಣಶೆಟ್ಟಿ, ಪ್ರಭಾಕರ್ ಬೋಸಲೆ, ವಿಜಯ್ ಕೋರಳ್ಳಿ, ರವಿ ಕಲ್ಲೂರ, ಬಸವರಾಜ ತೊನಶ್ಯಾಳ, ರಾಜು ಬಿರಾದಾರ, ಸಂದೀಪ್ ಪಾಟೀಲ್, ಜಗದೀಶ್ ಮುಚ್ಚಂಡಿ, ಬಸವರಾಜ್ ಹಳ್ಳಿ, ಶ್ರೀಕಾಂತ್ ಶಿಂಧೆ, ರಾಜೇಶ್ ತಾವಸೆ, ಸಂಪತ್ ಕೋವಳ್ಳಿ, ವಿನಾಯಕ್ ದಹಿಂಡೆ, ರಾಮಚಂದ್ರ ಚವ್ಹಾಣ, ವಿಜಯ್ ಹಿರೇಮಠ, ವಿವೇಕ್ ತಾವರಗೇರಿ, ಅಂಬಾದಾಸ್ ವಿಭೂತೆ, ಆನಂದ್ ಮುಚ್ಚಂಡಿ, ಮಂಥನ್ ಗಾಯಕವಾಡ್, ನಿಖಿಲ್ ಮ್ಯಾಗೇರಿ, ರಾಹುಲ್ ರಾಹುಲ್ ಮಾನೆ, ಸತೀಶ ಪಾಟೀಲ, ಸಾಗರ ಅಡಕಿ ಮೊದಲಾದವರು ಪಾಲ್ಗೊಂಡಿದ್ದರು.

ವರದಿ : ಅಜೀಜ ಪಠಾಣ.

error: Content is protected !!