ಕನ್ನಡ ಭಾಷೆಯನ್ನು ತಾಯಿಯಂತೆ ಪ್ರೀತಿಸಿ: ಶಾಸಕ ಪ್ರಭು ಚವ್ಹಾಣ

 

ಕನ್ನಡ ಜ್ಯೋತಿ ರಥಯಾತ್ರೆಗೆ ಔರಾದನಲ್ಲಿ ಅದ್ಧೂರಿ ಸ್ವಾಗತ

 

 

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಗೆ ಅ.13ರಂದು ಔರಾದ ಪಟ್ಟಣದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅದ್ಧೂರಿಯಾಗಿ ಸ್ವಾಗತಿಸಿದರು.

 

ಪಟ್ಟಣದ ಬಸವೇಶ್ವರ ವೃತ್ತದ ಬಳಿ ರಥದಲ್ಲಿ ಅಲಂಕೃತಗೊಂಡಿರುವ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿದರು. ಬಳಿಕ ತಮಟೆ ಬಾರಿಸುವುದರೊಂದಿಗೆ ಶಾಸಕರು ರಥಕ್ಕೆ ಚಾಲನೆ ನೀಡಿದರು.

 

ಬಳಿಕ ಬಸವೇಶ್ವರ ವೃತ್ತದಿಂದ ಕನ್ನಡಾಂಬೆ ವೃತ್ತದ ವರೆಗೆ ಕನ್ನಡ ಜ್ಯೋತಿ ರಥದ ಭವ್ಯ ಮೆರವಣಿಗೆ ನಡೆಯಿತು. ಕನ್ನಡ ಬಾವುಟದ ಬಣ್ಣಗಳಿರುವ ಶಾಲುಗಳನ್ನು ಧರಿಸಿದ ಕನ್ನಡಾಭಿಮಾನಿಗಳು ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡಕ್ಕೆ ಜಯವಾಗಲಿ, ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎನ್ನುವ ಕನ್ನಡಪರ ಘೋಷಣೆಗಳನ್ನು ಮೊಳಗಿಸಿದರು.

 

ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಕಛೇರಿ ಮತ್ತು ಅಂಗಡಿಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯನ್ನು ಬಳಸಬೇಕೆಂದು ಸರ್ಕಾರದ ಆದೇಶವಿದೆ. ಆದರೆ ಶೇ.100ರಷ್ಟು ಕನ್ನಡ ಬಳಕೆಯಾಗಬೇಕು. ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವಂತಾಗಬೇಕು. ಈ ದಿಶೆಯಲ್ಲಿ ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಕನ್ನಡ ಭಾಷೆಯನ್ನು ತಾಯಿಯಂತೆ ಪ್ರೀತಿಸಬೇಕು ಎಂದು ತಿಳಿಸಿದರು.

 

ನಾನು ಕನ್ನಡದ ಪ್ರೇಮಿಯಾಗಿದ್ದು, ಕನ್ನಡದ ಕೆಲಸಗಳಿಗೆ ಸದಾ ಸಿದ್ದನಿದ್ದೇನೆ. ಗಡಿ ಭಾಗವಾಗಿರುವ ಔರಾದ(ಬಿ) ಕ್ಷೇತ್ರದಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿದೆ. ಇಲ್ಲಿ ಕನ್ನಡ ಭಾಷೆಯನ್ನು ಬೆಳೆಸಲು ನಿರಂತರ ಪ್ರಯತ್ನ ವಹಿಸುತ್ತಿದ್ದೇನೆ. ಹಿಂದೆ ಕನ್ನಡ ಶಿಕ್ಷಕರ ಕೊರತೆಯಿತ್ತು. ನಾನು ಶಾಸಕನಾದ ನಂತರ ಕನ್ನಡ ಶಿಕ್ಷಕರನ್ನು ತರಲಾಗಿದೆ. ಕನ್ನಡ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

 

ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮವಾಗಿ ಕೆಲಸ ಮಾಡುತ್ತಿದೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಕನ್ನಡ ಜ್ಯೋತಿ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ, ಪ್ರಚಾರ ಕಾರ್ಯಕ್ರಮ ಗಡಿ ಭಾಗಗಳಲ್ಲಿ ವ್ಯವಸ್ಥಿತವಾಗಿ ನಡೆಯಬೇಕು.  ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಕೋರಿದರು.

 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸುತ್ತಿದೆ. ಅದರ ಭಾಗವಾಗಿ ಬೀದರ ಜಿಲ್ಲೆಯಲ್ಲಿಯೂ ಸಂಚರಿಸುತ್ತಿದೆ. ಸಮ್ಮೇಳನದ ಯಶಸ್ವಿಗೆ ಎಲ್ಲ ಕನ್ನಡಾಭಿಮಾನಿಗಳು ಕೈ ಜೋಡಿಸಬೇಕು ಎಂದು ಕೋರಿದರು.

 

ಔರಾದ(ಬಿ) ಪಟ್ಟಣ ಪಂಚಾಯತ್‌ ಅಧ್ಯಕ್ಷರಾದ ಸರುಬಾಯಿ ಘೂಳೆ, ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ, ಜಿಲ್ಲಾ ಸಂಚಾಲಕ ವಿಜಯಕುಮಾರ ಗೌರೆ, ತಾಲ್ಲೂಕು ಅಧ್ಯಕ್ಷ ಡಾ.ಶಾಲಿವಾನ್‌ ಉದಗೀರೆ, ಎಂ.ಎಸ್‌ ಮನೋಹರ್‌, ನಿಕಟಪೂರ್ವ ಅಧ್ಯಕ್ಷ ಜಗನಾಥ ಮೂಲಗೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಶಿವರಾಜ ಅಲ್ಮಾಜೆ, ಕೇರಬಾ ಪವಾರ್‌, ಅಶೋಕ ಅಲ್ಮಾಜೆ, ಸಂದೀಪ ಪಾಟೀಲ, ಜಗನಾಥ ದೇಶಮುಖ, ಅಮೃತರಾವ ಬಿರಾದಾರ, ಅಶೋಕ ಶೆಂಬೆಳ್ಳಿ, ಮಹಾನಂದ ಎಂಡೆ, ಮಲ್ಲಪ್ಪ ಗೌಡ, ರಾಘವೇಂದ್ರ ಸೇರಿದಂತೆ ಅಧಿಕಾರಿಗಳು, ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ