ವಿನಾಯಕ ವರದಾಯಕ‌ಪ್ರಶಸ್ತಿ ಪ್ರದಾನ ಮಕ್ಕಳಿಗೆ ತಂದೆತಾಯಿ ಉತ್ತಮ ಸಂಸ್ಕಾರ ನೀಡಬೇಕು- ಪಂಚಾಕ್ಷರಿ ದೇವರು

ಚಿಂಚೋಳಿ: ವ್ಯಕ್ತಿಯ ಜೀವನದಲ್ಲಿ ಸಂಸ್ಕಾರಗಳ ಪಾತ್ರ ದೊಡ್ಡದಿದೆ. ಅಂತೆಯೇ ಹುಟ್ಟಿನಿಂದ ಚಟ್ಟದವರೆಗೆ ಹಲವಾರು ಸಂಸ್ಕಾರಗಳು ನಡೆಸಲಾಗುತ್ತಿದೆ ಸಂಸ್ಕಾರಗಳಿಂದ ವ್ಯಕ್ತಿ ಪರಿಪೂರ್ಣವಾದ ಸಾರ್ಥಕ ಜೀವನ ನಡೆಸಲು ಸಾಧ್ಯವಿದೆ ಹೀಗಾಗಿ ಮಕ್ಕಳಿಗೆ ಜೀವನ ಮೌಲ್ಯಗಳ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕೆಂದು ಐನಾಪುರದ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಪಂಚಾಕ್ಷರಿ ದೇವರು ತಿಳಿಸಿದರು. ಅವರು ಪಟ್ಟಣದ ಮಹಾಂತೇಶ್ವರ ಮಠದಲ್ಲಿ ಶ್ರೀ ಮಹಾಂತೇಶ್ವರ ಗಜಾನನ ನವ ಯುವಕ ಸಂಘ ಹಮ್ಮಿಕೊಂಡ 4ನೇ ವರ್ಷದ ಗಣೇಶ ಉತ್ಸವದಲ್ಲಿ ವಿವಿಧ ಸಾಧಕರಿಗೆ ವಿನಾಯಕ ವರದಾಯಕ ಪ್ರಶಸ್ತಿ ಪ್ರದಾನ ಮಾಡಿ ಸೋಮವಾರ ಆಶೀರ್ವಚನ ನೀಡಿದರು. ತಂದೆತಾಯಿ ಮನೆಯಲ್ಲಿ ಉತ್ತಮ ನಡತೆ ಹೊಂದಿದ್ದರೆ ಮಕ್ಕಳು ಒಳ್ಳೆ ನಡತೆ ಬೆಳೆಸಿಕೊಳ್ಳುತ್ತಾರೆ ಆದರೆ ತಂದೆತಾಯಿಗಳಿಗೆ ಸಂಸ್ಕಾರದ ಕೊರತೆ ಎದುರಾದರೆ ಮಕ್ಕಳು ದಾರಿ ತಪ್ಪುತ್ತಾರೆ ಹೀಗಾಗಿ ಇಂದಿನ ಸಮಾಜದಲ್ಲಿ ಮಕ್ಕಳ ಜತೆಗೆ ತಂದೆ ತಾಯಿಗೂ ಸಂಸ್ಕಾರ ನೀಡಬೇಕಾದ ಅಗತ್ಯವಿದೆ ಎಂದರು. ಇಲ್ಲಿವರೆಗೆ ಸಾರ್ವಜನಿಕವಾಗಿ ಮಕ್ಕಳಿಂದ ತಂದೆತಾಯಿ ಪೂಜೆ ನಡೆಸಿದ್ದು ಕೇಳಿಲ್ಲ ಆದರೆ ಚಿಂಚೋಳಿಯ ಮಹಾಂತೇಶ್ವರ ಗಜಾನನ ಯುವಕ ಸಂಘದವರು ಮಕ್ಕಳಿಂದ ತಂದೆತಾಯಿ ಪಾದ ಪೂಜೆ ಕಾರ್ಯಕ್ರಮ ಏರ್ಪಡಿಸಿದ್ದು ಸಕಾಲಿಕವಾಗಿದೆ ಎಂದರು. ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲರಾವ್ ಕಟ್ಟಿಮನಿ ಮಾತನಾಡಿ ತಂದೆತಾಯಿ ತಮ್ಮ ಜೀವನ ಸವೆಸಿ ಮಕ್ಕಳನ್ನು ಬೆಳೆಸುತ್ತಾರೆ ಆದರೆ ದೊಡ್ಡವರಾದ ಮೇಲೆ ಮಕ್ಕಳು ತಂದೆತಾಯಿಯಿಂದ ದೂರಾಗುತ್ತಿದ್ದಾರೆ ಇದು ಅತ್ಯಂತ ಕೆಟ್ಟ ಪದ್ದತಿಯಾಗಿದೆ ಎಂದರು. ತಂದೆತಾಯಿಗಳೇ ಜೀವಂತ ದೇವರು ಅವರ ಸೇವೆ ಪ್ರತಿ ಮಗುವಿನ ಜೀವನದ ಹೆಗ್ಗುರಿಯಾಗಬೇಕು ಆದರೆ ತಂದೆತಾಯಿ ಭಾರ ಎಂಬ ಭಾವನೆ ಬೆಳೆಯುತ್ತಿರುವುದು ಕಳವಳಕಾರಿಯಾಗಿದೆ ಎಂದರು. ಅನುಭಾವಿಗಳಾದ ಜಗದೀಶ ಮರಪಳ್ಳಿ, ಯುವ ಮುಖಂಡ ನಾಗರಾಜ‌ ಮಲಕೂಡ ಮಾತನಾಡಿದರು. ಸಮಾರಂಭದಲ್ಲಿ ಸತ್ಯನಾರಾಯಣ ನಿರಾಳೆ(ವ್ಯಾಪಾರ), ಗಿರಿರಾಜ ಸಜ್ಜನಶೆಟ್ಟಿ( ಎಂಜಿನೀಯರ್), ಭೀಮಶೆಟ್ಟಿ ಮುಕ್ಕಾ( ಗೋಸಂರಕ್ಷಣೆ), ಡಾ. ಸಂತೋಷ ಪಾಟೀಲ( ಆರೋಗ್ಯ ಸೇವೆ), ಜಗದೀಶ ಮರಪಳ್ಳಿ( ವಚನ ಸಾಹಿತ್ಯ), ಶಂಕರಜಿ ಹೂವಿನ ಹಿಪ್ಪರಗಿ (ರಂಗಭೂಮಿ), ರೇವಣಸಿದ್ದಯ್ಯ ಹಿರೇಮಠ( ಸಂಗೀತ) ಸಂಗಾರಡ್ಡಿ ನರಸಣ್ಣನವರ( ಧಾರ್ಮಿಕ), ಖಾಜಪ್ಪ ಚಂದ್ರಂಪಳ್ಳಿ( ನಾಟಿ ವೈದ್ಯ) ಅವರಿಗೆ ವಿನಾಯಕ ವರದಾಯಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಬ್ರಹ್ಮಕುಮಾರಿ ಈಶ್ವರೀಯ ವಿವಿಯ ವಿಜಯಲಕ್ಷ್ಮೀ ಗೌಳಿ, ಹಿರಿಯರಾದ ಶಾಂತವೀರಪ್ಪ ಸುಂಕದ, ಯುವ ಮುಖಂಡ ಸಂತೋಷ ಗಡಂತಿ, ಎಂಆರ್ ಎಫ್ ಶೋರೂಂ ಮಾಲೀಕ ಸಚ್ಚಿದಾನಂದ ಸುಂಕದ ಅತಿಥಿಗಳಾಗಿ ಆಗಮಿಸಿದ್ದರು. ನಿವೃತ್ತ ಶಿಕ್ಷಕ ಸಂಗಪ್ಪ ಪಾಲಾಮೂರ ಅಧ್ಯಕ್ಷತೆವಹಿಸಿದ್ದರು. ಭುವನೇಶ್ವರಿ ಸ್ವಾಗತಿಸಿದರು, ಜಗನ್ನಾಥ ಶೇರಿಕಾರ ನಿರೂಪಿಸಿದರು. ವೀರೇಶ ಮುದಾಳಿ ವಂದಿಸಿದರು. ಲಕ್ಷ್ಮೀಕಾಂತ ಓಲಗೇರಿ, ವೀರಭದ್ರ ಭಾಲಿ, ರಾಧಾಕೃಷ್ಣ ಕಳಸ್ಕರ, ಮನೋಜರಡ್ಡಿ, ಆದಿತ್ಯ ಪೋಳ, ಮಣಿಕಂಠ‌ ಸೀಳಿನ್,ಕರಣರಡ್ಡಿ, ಬಸವರಡ್ಡಿ, ನವಿನರಡ್ಡಿ, ಪ್ರವೀಣ, ಶ್ರೀಕಾಂತ, ವೀರೇಶರಡ್ಡಿ ಮೊದಲಾದವರು ಇದ್ದರು.

 

ವರದಿ : ರಾಜೇಂದ್ರ ಪ್ರಸಾದ್