ಪಿಎಂ ಆವಾಸ್‌ ಯೋಜನೆ- ಔರಾದ ಕ್ಷೇತ್ರಕ್ಕೆ 3,923 ಮನೆಗಳು ಮಂಜೂರು: ಶಾಸಕ ಪ್ರಭು ಚವ್ಹಾಣ

ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯಲ್ಲಿ 2024-25ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ಔರಾದ(ಬಿ) ಹಾಗೂ ಕಮಲಗರ ತಾಲ್ಲೂಕು ಒಳಗೊಂಡು ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ 3923 ಮನೆಗಳು ಮಂಜೂರಾಗಿವೆ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ತಿಳಿಸಿದ್ದಾರೆ.

 

ಔರಾದ(ಬಿ) ಹಾಗೂ ಕಮಲಗರ ತಾಲ್ಲೂಕಿನಲ್ಲಿ ವಸತಿ ರಹಿತ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ಪಕ್ಕಾ ಮನೆಗಳನ್ನು ಕಟ್ಟಿಸಿಕೊಡುವಂತಾಗಲು ಮನೆಗಳನ್ನು ಮಂಜೂರು ಮಾಡಬೇಕೆಂದು ಈ ಹಿಂದೆ ಹಲವಾರು ಬಾರಿ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿ ಔರಾದ ಕ್ಷೇತ್ರಕ್ಕೆ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಷೇತ್ರದ ಮಹಾಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

 

ಪಿಎಂ ಆವಾಸ್‌ (ಗ್ರಾಮೀಣ) ಯೋಜನೆಯಡಿ 2024-25ನೇ ಸಾಲಿಗೆ ರಾಜ್ಯಕ್ಕೆ 2,26,175 ಮನೆಗಳನ್ನು ಮಂಜೂರು ಮಾಡಲಾಗಿದೆ. ಬೀದರ ಜಿಲ್ಲೆಗೆ 15,035 ಮನೆಗಳು ಮಂಜೂರಾಗಿದ್ದು, ಈ ಪೈಕಿ ಔರಾದ(ಬಿ) ತಾಲ್ಲೂಕಿಗೆ 2286 ಹಾಗೂ ಕಮಲನಗರ ತಾಲ್ಲೂಕಿಗೆ 1,637 ಮನೆಗಳು ಸೇರಿ ಔರಾದ(ಬಿ) ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 3,923 ಮನೆಗಳು ಮಂಜೂರಾಗಿವೆ ಎಂದಿದ್ದಾರೆ.

 

2018ರ ವಸತಿ ರಹಿತರ ಸಮೀಕ್ಷಾ ಪಟ್ಟಿಯಂತೆ ಆದ್ಯತೆಗೆ ಅನುಗುಣವಾಗಿ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 1.75 ಲಕ್ಷ ಹಾಗೂ ಇತರೆ ಫಲಾನುಭವಿಗಳಿಗೆ 1.20 ಲಕ್ಷ ಸಹಾಯಧನ ನೀಡಲಾಗುತ್ತದೆ. ಒಟ್ಟು 3 ಕಂತುಗಳಲ್ಲಿ ಹಣ ಬಿಡುಗಡೆಯಾಗುತ್ತದೆ. ಮನೆ ಮಂಜೂರಾದ ನಂತರ ಜಿಪಿಎಸ್‌ ಕಳುಹಿಸಿದ ಬಳಿಕ ಕೂಡಲೇ ಮೊದಲ ಕಂತಿನ ಹಣ ಬಿಡುಗಡೆಯಾಗುತ್ತದೆ. ಮನೆ ನಿರ್ಮಾಣದ ಹಂತಗಳನ್ನು ಆಧರಿಸಿ ನಂತರದ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ.

 

ಹಿಂದೆ ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದವು. ಇದು ಮುಂದುವರೆಯಬಾರದು. ಫಲಾನುಭವಿಗಳ ಆಯ್ಕೆ, ಕಂತುಗಳ ಹಣ ಬಿಡುಗಡೆ ಹೀಗೆ ಯಾವುದೇ ಸಂದರ್ಭದಲ್ಲಿ ಯಾರಿಗೂ ಹಣ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಎಲ್ಲಿಯಾದರೂ ಮನೆಗಳ ಮಂಜೂರಾತಿಗಾಗಿ ಹಣ ಕೇಳುವುದು ಕಂಡುಬಂದಲ್ಲಿ ನೇರವಾಗಿ ನನ್ನ ಗಮನಕ್ಕೆ ತರಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 

ಗ್ರಾಮೀಣ ಭಾಗದಲ್ಲಿ ವಾಸಿಸುವ ಅನೇಕ ಬಡವರು ಸ್ವಂತ ಮನೆಯಿಲ್ಲದೇ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂಥವರಿಗೆ ಪಕ್ಕಾ ಮನೆಗಳನ್ನು ಒದಗಿಸಿ ನೆಮ್ಮದಿಯ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ಅದರಂತೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಬೇಕು. ಯಾವುದೇ ರೀತಿಯ ದೂರುಗಳಿಗೆ ಅವಕಾಶ ನೀಡದ ರೀತಿಯಲ್ಲಿ ಕೆಲಸ ಮಾಡಬೇಕೆಂದು ಶಾಸಕರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

 

ವರದಿ : ರಾಚಯ್ಯ ಸ್ವಾಮಿ