ಯಾದಗಿರಿ: ದೂರುದಾರರಿಂದ ಫೋನ್ ಪೇ ನಲ್ಲಿ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಯಾದಗಿರಿ ತಾಲೂಕಿನ ಗುರುಮಠಕಲ್ ಪೊಲೀಸ್ ಠಾಣೆಯ ಇಬ್ಬರು ಕಾನ್ಸ್ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ.
ಘಟನೆ ವಿವರ: ಕಳೆದ ಜೂ.24 ರಂದು ಠಾಣಾ ವ್ಯಾಪ್ತಿಯ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು ಅವರ ಮಗ ಹಣಮಂತರಡ್ಡಿ ಎಂಬುವವರ ಮೇಲೆ ಯಾದಯ್ಯ, ಮಲ್ಲಯ್ಯ ಮತ್ತು ಗೋಪಿ ಎಂಬುವವರು ಸೇರಿದಂತೆ
ಐವರು ಮಾರಣಾಂತಿಕ ಹಲ್ಲೆ ನಡೆಸಿ ಹಾಗೂ ಜೀವ ಬೆದರಿಕೆಯೊಡ್ಡಿದ್ದಾರೆ ಅನುಸೂಯಾ ವೆಂಟಕರಡ್ಡಿ ಎಂಬುವವರು ದೂರು ನೀಡಿದ್ದರು.
ಆರೋಪಿಗಳನ್ನು ಬಂಧಿಸುವ ಕುರಿತು ವಿಚಾರಿಸಿದಾಗ ಅವರನ್ನು ಬಂಧಿಸಬೇಕಾದರೆ ಒಂದು ಲಕ್ಷ ರೂ. ನೀಡಬೇಕೆಂಬ ಬೇಡಿಕೆಯನ್ನು ಈ ಇಬ್ಬರು ಪೊಲೀಸರು ಇಟ್ಟಿದ್ದರು .
ವಿಶ್ವನಾಥ ರೆಡ್ಡಿ ಮತ್ತು ಗೋಪಾಲ ರೆಡ್ಡಿ ಅಮಾನತುಗೊಂಡವರು. ಇತ್ತೀಚೆಗೆ ಹಲ್ಲೆ ಪ್ರಕರಣವೊಂದರಲ್ಲಿ ಐವರನ್ನು ಬಂಧಿಸಲು ದೂರುದಾರರಿಂದ ತಲಾ 10 ಸಾವಿರ ರೂ.ಗಳನ್ನು ಫೋನ್ ಮೂಲಕ ಪಡೆದಿದ್ದರು ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಡಿವೈಎಸ್ಪಿಗೆ ಸೂಚನೆ ನೀಡಲಾಗಿತ್ತು. ಡಿವೈಎಸ್ಪಿ ಪಿ ಸುರೇಶ್ ಅವರು ನೀಡಿದ ವರದಿ ಆಧಾರದ ಮೇಲೆ ಇಬ್ಬರನ್ನು ಎಸ್ಪಿ ಪೃಥ್ವಿಕ್ ಶಂಕರ್ ಅಮಾನತು ಮಾಡಿ ಆದೇಶಿಸಿದ್ದಾರೆ.