ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲಿಸೋಣ : ಸಾಗರ ಖಂಡ್ರೆ

ಔರಾದ್ : ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ಸಮಾಜದ ಪ್ರತಿಯೊಬ್ಬರೂ ಪಾಲಿಸಬೇಕಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು. ಶನಿವಾರ ತಾಲೂಕಿನ ಕಂದಗೂಳ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ (ಪ್ರೋ. ಬಿ.ಕೃಷ್ಣಪ್ಪ) ಬಣ ಹಮ್ಮಿಕೊಂಡಿರುವ ಧಮ್ಮ ಚಕ್ರ ಪರಿವರ್ತನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪಾಲಿಸಿದಲ್ಲಿ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆಯೇ ಎಂದು ಕಿವಿಮಾತು ಹೇಳಿದರು.

ಬಡಜನರ ಕಲ್ಯಾಣ ಬಯಸಿ ತಮ್ಮದೇ ಚಿಂತನೆಗಳ ಮೂಲಕ ಜಗತ್ತಿನ ಗಮನ ಸೆಳೆದರು. ಬೌದ್ಧ ಧರ್ಮ ಭಾರತದಲ್ಲೇ ಹುಟ್ಟಿದರೂ ಅದು ಹೆಚ್ಚು ಪ್ರವಧರ್ಮಾನಕ್ಕೆ ಬಂದದ್ದು ಮಾತ್ರ ಬೇರೆ ರಾಷ್ಟçಗಳಲ್ಲಿ ಎಂದು ಬೇಸರ ವ್ಯಕ್ತಪಡಿಸಿದರು.

ಬುದ್ಧನ ಭಾರತದಲ್ಲಿ ಜಾತಿರಹಿತ ಸಮಾಜದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇತ್ತು. ಆತ ಜಗತ್ತಿನ ಎಲ್ಲ ವಿಷಯಗಳನ್ನು ತಿಳಿಸಿದ ಸರ್ವಶ್ರೇಷ್ಠ ಚಿಂತಕನಾಗಿದ್ದ, ಮೋಕ್ಷದಾತ ಎನ್ನುವದಕ್ಕಿಂತ ಆತ ಮಾರ್ಗದಾತ ಆಗಿದ್ದ ಎಂದು ಹೇಳಿದರು.

 

 

ಅಮಲಾಪೂರ ಬುದ್ಧ ವಿಹಾರದ ಭಂತೆ ಧಮ್ಮ ಕೀರ್ತಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಉಪನ್ಯಾಸಕರಾದ ಶಿವಶರಣಪ್ಪ ಹುಗ್ಗೆ ಪಾಟೀಲ್ ಉಪನ್ಯಾಸಕರಾಗಿ ಮಾತನಾಡಿದರು. ಮುಖಂಡ ಶಂಕರರಾವ ದೊಡ್ಡಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

 

ಪ್ರಮುಖರಾದ ವಿಶ್ವನಾಥ ದೀನೆ, ಪಿಎಸ್‌ಐ ನಂದಕುಮಾರ ಮೂಳೆ, ಕೆಎಎಸ್ ಅಧಿಕಾರಿ ಖಾಜಾ ಖಲೀಲಮೀಯ್ಯ, ಶಂಕರ ವಡಗಾಂವ, ದಸಂಸ ಜಿಲ್ಲಾಧ್ಯಕ್ಷ ಸತೀಶ ವಗ್ಗೆ, ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಸಂಜುಕುಮಾರ ಲಾಧಾ, ಮಹೀಂದ್ರಕುಮಾರ ಹೊಸಮನಿ, ನಿತೀಶ ಸಕಪಾಲ್, ರಮೇಶ ಪಾಟೀಲ್ ಕಂದಗೂಳ, ಕಾಶಿನಾಥ ಪಾಟೀಲ್, ಪಿಡಿಒ ಶರಣಪ್ಪ ಗಾದಗೆ, ಗ್ರಾಪಂ ಸದಸ್ಯರಾದ ಸುಮನಬಾಯಿ ಸೇರಿದಂತೆ ಅನೇಕರಿದ್ದರು.

 

ವರದಿ : ರಾಚಯ್ಯ ಸ್ವಾಮಿ