ಕಾಮಗಾರಿ ವೇಳೆ ಗೋಡೆ ಕುಸಿತ; ಮಣ್ಣಿನಡಿ ಸಿಲುಕಿ 7 ಮಂದಿ ಕಾರ್ಮಿಕರು ಜೀವಂತ ಸಮಾಧಿ

ಗಾಂಧಿನಗರ:‌ ಗೋಡೆ ಕುಸಿದು 7 ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟಿರುವ ದಾರುಣ ಘಟನೆ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಶನಿವಾರ(ಅ.12ರಂದು) ನಡೆದಿದೆ.

 

ನಗರದ ಕಾಡಿ ಪಟ್ಟಣದ ಬಳಿಯ ಕಾರ್ಖಾನೆಯೊಂದರ ಟ್ಯಾಂಕ್‌ ವೊಂದಕ್ಕೆ ಹೊಂಡ ತೋಡುತ್ತಿದ್ದಾಗ ಈ ದುರಂತ ನಡೆದಿರುವುದು ವರದಿಯಾಗಿದೆ.

 

ಮಧ್ಯಾಹ್ನ 1:45ರ ಸಮಯದಲ್ಲಿ ಹೊಂಡ ತೋಡುತ್ತಿದ್ದಾಗ ಪಕ್ಕದಲ್ಲಿದ್ದ ಖಾಸಗಿ ಕಂಪನಿಯ ಕಟ್ಟಡ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ. ಪರಿಣಾಮ ಹಲವಾರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ ಎಂದು ಜಿಲ್ಲಾ ಅಭಿವೃದ್ಧಿ ಅಧಿಕಾರಿ ಡಾ.ಹಸ್ರತ್ ಜಾಸ್ಮಿನ್ ತಿಳಿಸಿದ್ದಾರೆ.

9-10 ಜನರು ಮಣ್ಣಿನಡಿ ಸಿಕ್ಕಿಬಿದ್ದಿದ್ದಾರೆ. ಅದರಲ್ಲಿ 6 ಶವಗಳನ್ನು ಹೊರತೆಗೆಯಲಾಗಿದೆ. ಇವುಗಳಲ್ಲಿ 19 ವರ್ಷದ ಹುಡುಗನನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಇನ್ನು 2-3 ಮಂದಿ ಮಣ್ಣಿನಡಿ ಸಿಲುಕಿಕೊಂಡಿರುವ ಸಾಧ್ಯತೆಯಿದೆ ಎಂದು ಡಾ ಜಾಸ್ಮಿನ್ ಹೇಳಿದ್ದಾರೆ.

 

ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಏರಿಕೆ ಆಗುವ ಸಾಧ್ಯತೆಯಿದೆ ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ತರುಣ್ ದುಗ್ಗಲ್ ಹೇಳಿದ್ದಾರೆ.