ವಿಜಯಪುರ : ಕೇಂದ್ರ ಸರ್ಕಾರ ಪ್ರತಿ ವಿಧಾನಸಭಾ ಮತಕ್ಷೇತ್ರಗಳ ಪ್ರಗತಿಗೆ ಸಿಆರ್ಎಫ್ ಅಡಿಯಲ್ಲಿ ೮ ರಿಂದ ೧೦ ಕೋಟಿ ರೂ. ಅನುದಾನ ನೀಡಿದೆ, ಆದರೆ ಕಾಂಗ್ರೆಸ್ ಶಾಸಕರು ಪ್ರಧಾನಿ ಮೋದಿ ಅವರ ಕೊಡುಗೆಯನ್ನು ಸೌಜನ್ಯಕ್ಕೂ ಹೇಳುತ್ತಿಲ್ಲ,
ಭೂಮಿ ಪೂಜೆಯ ಬ್ಯಾನರ್ಗಳಲ್ಲಿಯೂ ಅವರ ಭಾವಚಿತ್ರ ಹಾಕುತ್ತಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಯೊಂದು ಮತಕ್ಷೇತ್ರ ಪ್ರಗತಿಯಾಗಬೇಕು ಎಂಬುದು ಪ್ರಧಾನಿ ಮೋದಿಜಿ ಅವರ ಹೆಬ್ಬಯಕೆ, ಹೀಗಾಗಿ ಪಕ್ಷಬೇಧ ಮಾಡದೇ ಅನುದಾನ ಒದಗಿಸುವ ಮೂಲಕ ಮೋದಿಜಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ ನಿತ್ಯ ಅನುಷ್ಠಾನಗೊಳಿಸುತ್ತಿದ್ದಾರೆ.
ಅದರನ್ವಯ ೨೦೨೫-೨೬ ನೇ ವರ್ಷದಲ್ಲಿ ಕೇಂದ್ರ ಸರ್ಕಾರ ಜಿಲ್ಲೆಯ ಪ್ರತಿಯೊಂದು ಕ್ಷೇತ್ರಕ್ಕೂ ೮ ರಿಂದ ೧೦ ಕೋಟಿ ರೂ. ಸಿಆರ್ಎಫ್ ಅಡಿಯಲ್ಲಿ ಅನುದಾನ ಮಂಜೂರಾಗಿದೆ.
ಈ ಅನುದಾನ ಅಡಿಯಲ್ಲಿ ರಸ್ತೆ ಮೊದಲಾದ ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್ ಶಾಸಕರು ಭೂಮಿ ಪೂಜೆ ನೆರವೇರಿಸಿ ತಮ್ಮ ರಾಜ್ಯ ಸರ್ಕಾರದ ಲೇಬಲ್ ಅಂಟಿಸಿಕೊಳ್ಳುತ್ತಿದ್ದಾರೆ.
ತಮ್ಮ ಭಾಷಣದಲ್ಲಿ ಯಾದರೂ ಈ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರ ಅನುದಾನ ನೀಡಿದೆ, ಸಿಆರ್ಎಫ್ ಅನುದಾನ ಈ ಕಾಮಗಾರಿಗೆ ದೊರಕಿದೆ ಎಂಬ ಮಾತು ಹೇಳದೇ ಜನರನ್ನು ವಾಸ್ತವ ಸಂಗತಿಗಳಿಂದ ಮುಚ್ಚಿಡುತ್ತಿದ್ದಾರೆ.
ಕೇಂದ್ರದ ಅನುದಾನ ದೊರಕುವ ಯೋಜನೆಗಳ ಭೂಮಿ ಪೂಜೆ ಸಂದರ್ಭದಲ್ಲಿಯೂ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಬ್ಯಾನರ್ನಲ್ಲಿ ಹಾಕುವ ಸೌಜನ್ಯವನ್ನು ತೋರುತ್ತಿಲ್ಲ, ಇದು ನ್ಯಾಯವೇ, ಇದು ಧರ್ಮವೇ? ಎಂದು ಜಿಗಜಿಣಗಿ ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳು ಬಿಜೆಪಿ ಜನಪ್ರಿಯತೆಗೆ ಹೆದರುವಂತಾಗಿದೆ.
ಕೇಂದ್ರ ಸರ್ಕಾರದ ಸಾಧನೆ, ಯೋಜನೆಗಳನ್ನೇ ಅಷ್ಟೇ ಏಕೆ ಅಭಿವೃದ್ಧಿ ಕಾರ್ಯಗಳಿಗೂ ಸಹ ತಮ್ಮ ಅನುದಾನ ಎಂದು ಬಿಂಬಿಸುವ ಮೂಲಕ ಜನರಿಗೆ ದಿಕ್ಕು ತಪ್ಪುವ ಕಾರ್ಯ ಮಾಡುತ್ತಿದೆ, ಕೂಡಲೇ ಈ ರೀತಿಯ ತಾತ್ಸಾರ ಮನೋಭಾವದಿಂದ ಕಾಂಗ್ರೆಸ್ ಜನಪ್ರತಿನಿಧಿಗಳು ಹೊರಬರಬೇಕು, ಯಾರು ಅಭಿವೃದ್ಧಿಗೆ ಅನುದಾನ ನೀಡಿದ್ದಾರೋ ಅವರ ಹೆಸರನ್ನು ಉಲ್ಲೇಖಿಸಬೇಕು ಎಂದು ಜಿಗಜಿಣಗಿ ಕಿವಿಮಾತು ಹೇಳಿದ್ದಾರೆ.
ವರದಿ : ಅಜೀಜ ಪಠಾಣ