ಗುರುವಾರ ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (Air India Flight Crash) ಭೀಕರ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ ಹಲವಾರು ಪ್ರಯಾಣಿಕರು (Passengers) ಸಾವನ್ನಪ್ಪಿದ್ದಲ್ಲದೆ, ವಿಮಾನವು ಕಟ್ಟಡಕ್ಕೆ ಡಿಕ್ಕಿ ಹೊಡೆದಾಗ ಹಲವಾರು ನಿವಾಸಿಗಳು (Locals) ಮತ್ತು ಅಕ್ಕ ಪಕ್ಕದಲ್ಲಿದ್ದವರು ಸಾವನ್ನಪ್ಪಿದ್ದಾರೆ. ಹೀಗೆ ಬಲಿಯಾದವರಲ್ಲಿ 15 ವರ್ಷದ ಆಕಾಶ್ಭಾಯ್ ಸೂರಜ್ಭಾಯ್ ಪಟಾನಿ ಕೂಡ ಸೇರಿದ್ದರು. ದುರಂತ ಸಂಭವಿಸಿದಾಗ ಆ ಬಾಲಕ ತನ್ನ ತಾಯಿಯ ಚಹಾ ಅಂಗಡಿ ಬಳಿ ಮರದ ಹಾಸಿಗೆಯ ಮೇಲೆ ಮಲಗಿದ್ದನಂತೆ.
ವಿಮಾನ ಅಪಘಾತ ಸಂಭವಿಸಿದಾಗ ಉಂಟಾದ ಬೆಂಕಿಯ ಜ್ವಾಲೆಯಲ್ಲಿ ಆಕಾಶ್ ಸಾವನ್ನಪ್ಪಿದರೆ ಎಂದು ತಿಳಿದುಬಂದಿದೆ. ತನ್ನ ತಳ್ಳುಗಾಡಿಯಲ್ಲಿ ಚಹಾ ಮಾರುತ್ತಿದ್ದ ಅವನ ತಾಯಿ ಸೀತಾಭೇನ್ ಪಟಾನಿ ಕೂಡ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಪ್ರಸ್ತುತ ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ವಾರ್ಡ್ನಿಂದ ಕೆಲವೇ ಮೀಟರ್ ದೂರದಲ್ಲಿ, ಅವರ ಮಗನ ದೇಹ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿದೆ.
ಮರದ ಕೆಳಗೆ ಮಲಗಿದ್ದ 15 ವರ್ಷದ ಆಕಾಶ್ ಸಜೀವದಹನ!
ಈ ಅಪಘಾತ ಸಂಭವಿಸಿದಾಗ ಸೀತಾಭೇನ್ ಅವರ ಪತಿ ಆಟೋರಿಕ್ಷಾ ಚಾಲಕ ಸೂರಜ್ಭಾಯ್ ಅಹಮದಾಬಾದ್ನಲ್ಲಿ ಕರ್ತವ್ಯದಲ್ಲಿದ್ದರು. ಅಪಘಾತದ ಬಗ್ಗೆ 30 ನಿಮಿಷಗಳ ನಂತರ ಅವರಿಗೆ ತಿಳಿದು ಸ್ಥಳಕ್ಕೆ ಧಾವಿಸಿದ್ದು, ಅಲ್ಲಿ ಅವರ ಮಗ ಮೃತಪಟ್ಟಿರುವುದು ಕಂಡುಬಂದಿದೆ. ಇದನ್ನು ಕಂಡು ಶಾಕ್ ಆದ ತಂದೆ, “ಯಾವುದೇ ಸರ್ಕಾರ ಅಥವಾ ಹಣ ನನ್ನ ಮಗನನ್ನು ವಾಪಾಸ್ ಕೊಡಲು ಸಾಧ್ಯವಿಲ್ಲ, ಅವನು ಒಬ್ಬ ಬುದ್ಧಿವಂತ ಮಗುವಾಗಿದ್ದ” ಎಂದು ಸೂರಜ್ಭಾಯ್ ಆಸ್ಪತ್ರೆಯ ಹೊರಗೆ ತನ್ನ ಆಟೋದಲ್ಲಿ ಕುಳಿತು ದುಃಖದಿಂದ ಹೇಳಿದ್ದಾರೆ.
ಸ್ಥಳೀಯ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಆಕಾಶ್, ತನ್ನ ತಾಯಿಗೆ ಊಟ ಕೊಡಲು ಅವರ ಚಹಾ ಅಂಗಡಿಗೆ ಹೋಗಿದ್ದ. “ಅವರು ಊಟ ಮಾಡುತ್ತಿದ್ದಾಗ, ಈತ ಮರದ ಬಳಿ ಹಾಸಿಗೆ ಮೇಲೆ ಮಲಗಿದ್ದ. ಈ ವೇಳೆ ವಿಮಾನ ಅಪಘಾತಕ್ಕೀಡಾಗಿದ್ದು, ಬೆಂಕಿ ಕೆನ್ನಾಲಿಗೆಗೆ ಆಕಾಶ ಸಜೀವ ದಹನವಾಗಿದ್ದಾನೆ. ತನ್ನ ತಾಯಿ ಕಣ್ಮುಂದೆಯೇ ಮಗ ಆಕಾಶ್ ಜೀವಂತವಾಗಿ ಸುಟ್ಟುಹೋಗಿದ್ದಾನೆ” ಎಂದು ಆಕಾಶ್ ಅವರ ಸೋದರ ಮಾವ ಆಟೋರಿಕ್ಷಾ ಚಾಲಕ ವಿಶಾಲ್ಭಾಯ್ ಹೇಳಿದರು.
ಶವಾಗಾರದ ಬಳಿ ಜಮಾಯಿಸಿರುವ ಕುಟುಂಬ ನಷ್ಟವನ್ನು ನಿಭಾಯಿಸಲು ಹೆಣಗಾಡುತ್ತಿದೆ. ಸೀತಾಬೆನ್ ಬದುಕುಳಿದಿರುವುದು “ಅದೃಷ್ಟ” ಎಂದು ಅವರು ಪರಿಗಣಿಸಿದರೂ, ಆಕಾಶ್ನ ಮರಣದಿಂದ ಉಂಟಾದ ನೋವು ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರಾಕಿದ್ದಾರೆ.