ಅಂರ್ತಜಾತಿ ವಿವಾಹವಾಗಿದ್ದ ದಲಿತ ಯುವತಿಗೆ ವಿಷವುಣಿಸಿ ಕೊಲೆ : ಆರೋಪ

ಗಂಗಾವತಿ | ಅಂರ್ತಜಾತಿ ವಿವಾಹವಾಗಿದ್ದ ದಲಿತ ಯುವತಿಗೆ ವಿಷವುಣಿಸಿ ಕೊಲೆ : ಆರೋಪ

 

ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದ ದಲಿತ ಯುವತಿಯನ್ನು, ಯುವಕನ ಮನೆಯವರು ಮನಬಂದಂತೆ ಹಲ್ಲೆ ನಡೆಸಿ, ಬಳಿಕ ವಿಷ ಹಾಕಿ ಕೊಲೆಗೈದಿರುವ ಆರೋಪ ಕೇಳಿ ಬಂದಿದೆ.

 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾದಿಗ ಸಮುದಾಯಕ್ಕೆ ಸೇರಿದ ಮರಿಯಮ್ಮ (21) ಮೃತಪಟ್ಟ ಯುವತಿ ಎಂದು ವರದಿಗಳು ಹೇಳಿದೆ.

 

ಮರಿಯಮ್ಮ ಹಾಗೂ ಹನುಮಯ್ಯ ಇಬ್ಬರು ಪರಸ್ಪರ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮರಿಯಮ್ಮ ಮೂಲತ ಅಗೋಲಿ ಗ್ರಾಮದವರು. ವಿಠಲಾಪುರ ಗ್ರಾಮದಲ್ಲಿ ಅಜ್ಜಿ ಮನೆ ಇರುವುದರಿಂದ ಅವಾಗವಾಗ ಅಲ್ಲಿಗೆ ಹೋಗುತ್ತಿದ್ದರು. ಈ ವೇಳೆ ಗ್ರಾಮದ ಯುವಕ ಹನುಮಯ್ಯನ ಪರಿಚಯವಾಗಿತ್ತು.‌ಈ ಪರಿಚಯ ಪ್ರೀತಿಗೆ ತಿರುಗಿತ್ತು.

 

ಹನುಮಯ್ಯ ಎಸ್‌ಟಿ ಸಮುದಾಯಕ್ಕೆ ಸೇರಿದ ಯುವಕ. ಅಂತರ್ಜಾತಿಯ ಕಾರಣದಿಂದಾಗಿ ಮರಿಯಮ್ಮ ಹಾಗೂ ಹನುಮಯ್ಯ 2023ರ ಏಪ್ರಿಲ್‌ನಲ್ಲಿ ತಮ್ಮ ಕುಟುಂಬದವರನ್ನು ಒಪ್ಪಿಸಿ, ಬಳಿಕ ಗಂಗಾವತಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು. ಮದುವೆಯಾದ ನಂತರ ಯುವಕನ ಮನೆಯಲ್ಲಿ ಜಾತಿ ಸಂಬಂಧ ಯುವತಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.‌ ಅಲ್ಲದೇ, ವರದಕ್ಷಿಣೆ ತರುವಂತೆ ಕೂಡ ಪೀಡಿಸುತ್ತಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ.

 

ಯುವತಿ ಮಾದಿಗ ಸಮುದಾಯಕ್ಕೆ ಸೇರಿದವಳೆಂಬ ಕಾರಣಕ್ಕೆ ಮನೆಯ ಸಮೀಪವೇ ಬೇರೆಯೇ ಶೆಡ್ ಹಾಕಿ ಅಡುಗೆ ಮಾಡುವಂತೆ ಸೂಚಿಸಿದ್ದಲ್ಲದೇ, “ನಾವು ಯಾರೂ ನೀನು ಮಾಡಿದ ಅಡುಗೆ ತಿನ್ನುವುದಿಲ್ಲ” ಎಂದು ಅಸ್ಪೃಶ್ಯತೆ ಆಚರಣೆ ಮಾಡಿರುವುದಾಗಿ ತಿಳಿದು ಬಂದಿದೆ. ಅಲ್ಲದೇ, ಎಲ್ಲದಕ್ಕೂ ಜಾತಿಯ ಕಾರಣವೊಡ್ಡಿ ಕುಟುಂಬದಿಂದ ದೂರವಿಟ್ಟು, ಹಿಂಸೆ ನೀಡುತ್ತಿದ್ದರು ಎಂದು ಯುವತಿ ಮರಿಯಮ್ಮ ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿದ್ದರು ಎಂದು ವರದಿಯಾಗಿದೆ.

 

ಈ ನಡುವೆ ಯುವತಿಗೆ ಯುವಕನ ಕುಟುಂಬದವರು ಹಲ್ಲೆ ನಡೆಸಿದ್ದು,ಯುವತಿ ಸಾವನ್ನಪ್ಪಿದ್ದಾರೆ. ಕೊಲೆ ಮಾಡಿದ ಬಳಿಕ ಯಾವುದೇ ಅನುಮಾನ ಬಾರದಿರಲು ವಿಷವುಣಿಸಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.

 

ಆ ಬಳಿಕ ಯುವಕನ ಕುಟುಂಬದವರು ಯುವತಿಯ ಕುಟುಂಬಕ್ಕೆ ಕರೆ ಮಾಡಿ, “ನಿಮ್ಮ ಮಗಳು ಜಮೀನಿನಲ್ಲಿ ವಿಷ ಕುಡಿದಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದೆವು. ಅಲ್ಲಿ ಆಕೆಯ ಸಾವಾಗಿದೆ” ಎಂದು ತಿಳಿಸಿರುವುದಾಗಿ ಯುವತಿಯ ತಂದೆ ಗಂಗಾವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 

ವಿಷಯ ತಿಳಿದ ನಂತರ ವಿಠಲಾಪುರ ಗ್ರಾಮಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ಯುವತಿಯ ಮೃತ ದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲದೇ, ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.‌

 

ಯುವತಿಯ ತಂದೆ ಗಾಳೆಪ್ಪಅವರು ಯುವಕನ ಕುಟುಂಬದ 13 ಮಂದಿಯ ಮೇಲೆ ಕೊಲೆ ಆರೋಪ ಹೊರಿಸಿದ್ದರಿಂದ ಇಬ್ಬರನ್ನು ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

 

ವರದಿ ಸದಾನಂದ ಎಂ ಹೆಚ್