ಬಿಜೆಪಿ ಸದಸ್ಯತ್ವ ಅಭಿಯಾನ-೨೦೨೪ದ ಪೂರ್ವಭಾವಿ ಸಭೆ

ಪ್ರತಿ ಮಂಡಲಕ್ಕೆ ೪೦ ಸಾವಿರ ಹೊಸ ಸದಸ್ಯತ್ವ ಮಾಡಿಸಲು ಶ್ರಮಿಸಿ ಎಂದ ಪಿ.ರಾಜೀವ

 

ವಿಜಯಪುರ: ಬಿಜೆಪಿ ಸದಸ್ಯತ್ವ ಅಭಿಯಾನ-೨೦೨೪ ಸೆ.೨ ರಿಂದ ಆರಂಭವಾಗಲಿದ್ದು, ಪ್ರತಿ ಬೂತ್‌ಗೆ ೩೦೦ ರಂತೆ ಪ್ರತಿ ಮಂಡಲಕ್ಕೆ ೪೦ ಸಾವಿರ ಹೊಸ ಸದಸ್ಯರನ್ನು ಬಿಜೆಪಿ ಪಕ್ಷದ ಸದಸ್ಯರನ್ನಾಗಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಜಿ ಶಾಸಕ ಪಿ.ರಾಜೀವ ಕರೆ ನೀಡಿದರು.

 

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ-೨೦೨೪ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಸದಸ್ಯತ್ವ ಅಭಿಯಾನ ಪ್ರಮುಖ ಘಟ್ಟ. ಕೇಂದ್ರ ಸಚಿವರಿಂದ ಹಿಡಿದು ಬೂತ ಮಟ್ಟದ ಕಾರ್ಯಕರ್ತರು ಈ ಸದಸ್ಯತ್ವ ಅಭಿಯಾನದಲ್ಲಿ ಅತ್ಯಂತ ಕ್ರೀಯಾಶೀಲವಾಗಿ ಪಾಲ್ಗೊಂಡು ತಮ್ಮ ತಮ್ಮ ಬೂತ ಮಟ್ಟದಲ್ಲಿ ೩೦೦ ಹೊಸ ಸದಸ್ಯರನ್ನಾಗಿ ಮಾಡುವಂತೆ ತಿಳಿಸಿದರು.

 

ಈ ಬಾರಿಯ ಸದಸ್ಯತ್ವ ಅಭಿಯಾನ ಸ್ವಲ್ಪ ವಿಭಿನ್ನವಾಗಿದ್ದು, ಕೇವಲ ಮಿಸ್ ಕಾಲ ನೀಡಿದರೆ ಸದಸ್ಯರಾಗಲ್ಲ. ಮೊಬೈಲ್ ಬರುವ ಒಟಿಪಿ ಬಳಸಿಕೊಂಡು ಐಡಿ ಕಾರ್ಡ ಆದ ನಂತರವೇ ಸದಸ್ಯತ್ವ ಅಭಿಯಾನ ಪೂರ್ತಿಯಾದಂತೆ ಅದನ್ನು ಕಾರ್ಯಕರ್ತರು ಗಮನಿಸಬೇಕು ಎಂದರು.

 

ಅಲ್ಲದೇ ಸದಸ್ಯತ್ವ ಅಭಿಯಾನದಲ್ಲಿ ಪ್ರತಿ ಮತಕ್ಷೇತ್ರ-ಮಂಡಲದಲ್ಲಿರುವ ಬರುವ ಮಾಜಿ ಸಚಿವರು ಹಾಲಿ ಹಾಗೂ ಮಾಜಿ ಶಾಸಕರು, ಮಾಜಿ ವಿಧಾನ ಪರಿಷತ್, ಜಿ.ಪಂ.ಹಾಗೂ ತಾ.ಪಂ.ಮಾಜಿ ಸದಸ್ಯರು ಮಾಜಿ ಮಹಾನಗರ ಪಾಲಿಕೆಗಳ ಸದಸ್ಯರು ಕೂಡ ಪ್ರತಿ ಮನೆಗಳಿಗೆ ಹೋಗಿ ಜನರಿಗೆ ಅರಿವು ಮೂಡಿಸಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

 

ಅಭಿಯಾನದಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಸೂಚನೆ ಬರದಿದ್ದರೂ ಸ್ವಯಂಪ್ರೇರಿತವಾಗಿ ಸದಸ್ಯತ್ವ ಅಭಿಯಾನದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು.

 

ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ೩.೫೦ ಲಕ್ಷ ಹೊಸ ಸದಸ್ಯರ ಐಡಿ ರಚಿಸಬೇಕು. ಸೆ.೨ ರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಸೆ.೩೦ ರೊಳಗಾಗಿ ಅಭಿಯಾನ ಮುಗಿಸಬೇಕೆಂದರು.

 

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಬಿಜೆಪಿ ಸದಸ್ಯತ್ವ ಅಭಿಯಾನದಿಂದ ಪಕ್ಷದ ಸಂಘಟನೆಗೆ ಹೆಚ್ಚಿನ ಬಲ ಬರಲಿದೆ.

 

ಕಾರ್ಯಕರ್ತರು ಪ್ರಾಮಾಣಿಕವಾಗಿ ಜವಾಬ್ದಾರಿ ವಹಿಸಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

 

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಸಂಪೂರ್ಣವಾಗಿ ಮುಂದಿನ ೧ ತಿಂಗಳುಗಳ ಕಾಲ ಸದಸ್ಯತ್ವ ಅಭಿಯಾನಕ್ಕೆ ಕಾರ್ಯಕರ್ತರು ದುಡಿಯಬೇಕು. ಆ ಮೂಲಕ ಜಿಲ್ಲಾದ್ಯಂತ ಯಶಸ್ವಿಯಾಗಿ ಸದಸ್ಯತ್ವ ಅಭಿಯಾನ ಮಾಡುವಂತೆ ಕೋರಿದರು.

 

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಮುಖಂಡರಾದ ವಿಜುಗೌಡ ಪಾಟೀಲ,ಬಸವರಾಜ ಯಂಕಂಚಿ ಚಂದ್ರಶೇಖರ ಕವಟಗಿ, ಕಾಸು ಗೌಡ ಬಿರಾದಾರ, ಸಂಜೀವ ಐಹೊಳೆ, ಸ್ವಪ್ನಾ ಕಣಮುಚನಾಳ, ಈರಣ್ಣಾ ರಾವರೂ, ಸಾಬು ಮಾಶ್ಯಾಳ, ಮುಳುಗೌಡ ಪಾಟೀಲ, ರಾಜ್ಯ ಪದಾಧಿಕಾರಿಗಳು, ಪಾಲಿಕೆ ಸದಸ್ಯರು, ಜಿಲ್ಲಾ ಪದಾಧಿಕಾರಿಗಳು,ಮಂಡಲ ಪದಾಧಿಕಾರಿಗಳು, ಪ್ರಕೋಷ್ಠ ಪದಾಧಿಕಾರಿಗಳು, ಮಹಿಳಾ ಮೋಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು

 

 

ವರದಿ : ದೌಲಪ್ಪ ಮನಗೂಳಿ