ಈದುಲ್ ಅಳ್’ಹ ಪ್ರವಾದಿ ಇಬ್ರಾಹಿಂ (ಅ) ಪತ್ನಿ ಹಾಜಾರ ಬೀವಿ (ರ.ಅ) ಹಾಗೂ ಪುತ್ರ ಪ್ರವಾದಿ ಇಸ್ಮಾಯಿಲ್ (ಅ) ರವರ ಸ್ಮರಣೆಯ ಅನರ್ಘ್ಯ ನಿಮಿಷಗಳಾಗಿವೆ. ದಂಪತಿಗಳ ತ್ಯಾಗ ಸಮರ್ಪಣೆಯನ್ನು ಸ್ಮರಿಸುವುದು ಹಬ್ಬದ ಪ್ರಮುಖ ಘಟ್ಟ ಮತ್ತು ಪರಿಪೂರ್ಣತೆ. ಪ್ರವಾದಿ ಪೈಗಂಬರರ ಅನುಯಾಯಿಗಳಿಗೆ ಅಲ್ಲಾಹನು ವಿಶೇಷವಾಗಿ ಒದಗಿಸಲಾಗಿರುವ ಎರಡು ಪವಿತ್ರ ಹಬ್ಬಗಳ ಪೈಕಿ ಈದುಲ್ ಅಳ್’ಹ ಮೊದಲನೆಯದು. ಈದುಲ್ ಫಿತ್ರ್ ದಾನ ಧರ್ಮದ ಮಹತ್ವವಾದರೆ, ಈದುಲ್ ಅಳ್’ಹ ಬಲಿದಾನದ ಶ್ರೇಷ್ಠತೆಯನ್ನು ಸಾರುತ್ತಿದೆ. ಬಡತನದ ನಿರ್ಮೂಲನೆಗೆ ಈ ಎರಡು ಹಬ್ಬಗಳು ಕೈಗನ್ನಡಿ ಎಂದರೂ ತಪ್ಪಾಗಲಾರದು. ಫಿತ್ರ್ ಮತ್ತು ಕುರ್ಬಾನಿಯನ್ನು ಊರಿನಲ್ಲಿರುವ ದೈನಂದಿನ ಖರ್ಚಿಗು ಪ್ರಯಾಸ ಅನುಭವಿಸುವ ಕಡುಬಡವನಿಗೆ ನೀಡಲು ಇಸ್ಲಾಂ ಕಲ್ಪಿಸಿರುವುದು. ಇಸ್ಲಾಂ ಧರ್ಮದ ಎಲ್ಲಾ ಆರಾಧನೆಗಳಲ್ಲಿ ಭಕ್ತಿಯಾಗಿದೆ ಮುಖ್ಯವಾದದ್ದು. ಇಲ್ಲಿಯೂ ಅಲ್ಲಾಹನು ಪವಿತ್ರ ಕುರ್ಆನಿನ ಮೂಲಕ “ನೀವು ಬಲಿ ಅರ್ಪಿಸುವ ಪ್ರಾಣಿಯ ಗಾತ್ರವನ್ನಾಗಲಿ, ರಕ್ತವನ್ನಾಗಲಿ ನೋಡಲಾರೆ, ನಾನು ನಿಮ್ಮ ಹೃದಯದಲ್ಲಿರುವ ಭಕ್ತಿಯನ್ನು ನೋಡುವೆ” ಎಂದು ಹೇಳುತ್ತಾನೆ. ಭಕ್ತಿಯಿಲ್ಲದ ಸತ್ಕರ್ಮಗಳವು ನಿಸ್ಪ್ರಯೋಜನವಾದದ್ದು, ಅವುಗಳನ್ನು ಅಲ್ಲಾಹನು ಸ್ವೀಕರಿಸುವುದಿಲ್ಲ ಎಂದು ಪುಣ್ಯ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಬದುಕಿನ ಉದ್ದಗಲಕ್ಕೂ ಅನುಯಾಯಿಗಳಿಗೆ ಸಾರಿ ಹೇಳಿದ್ದಾರೆ.
ಪ್ರವಾದಿ ಇಬ್ರಾಹಿಂ (ಅ) ಮತ್ತು ಹಾಜಾರ ಬೀವಿ (ರ.ಅ) ಅವರಿಗೆ ಮಕ್ಕಳಾಗಿರಲಿಲ್ಲ. ರಾತ್ರಿ ಹಗಲೆನ್ನದೆ ಆರಾಧನೆಗಳಲ್ಲಿ ತೊಡಗಿಸುತ್ತಿದ್ದ ದಂಪತಿಗಳು ಮಕ್ಕಳಿಗಾಗಿ ಪ್ರಾರ್ಥಿಸಿದ ಪ್ರಾರ್ಥನೆಗಳು ಅಪಾರ, ಅಗಣಿತ.
ವೃದ್ಯಾಪ್ಯದಲ್ಲೂ ಮಕ್ಕಳಿಗಾಗಿ ಪ್ರಾರ್ಥಿಸುವಲ್ಲಿ ಹಿಂಜರಿಯದ ದಂಪತಿಗಳಿಗೆ ಅಲ್ಲಾಹನು ಕೊನೆಗೂ ತಮ್ಮ 90ನೇ ವಯಸ್ಸಿನಲ್ಲಿ ಗಂಡು ಮಗುವನ್ನು ಪ್ರಾಪ್ತಿಸುತ್ತಾನೆ. ದಂಪತಿಗಳ ಪಾಲಿಗೆ ಜೀವನದ ಮಹಾಗನಸು ಸಾಕ್ಷಾತ್ಕಾರಗೊಂಡ ಕ್ಷಣವನ್ನು ಸಂಭ್ರಮಿಸಿದ ಪರಿಯೇ ವಿಶೇಷವಾಗಿತ್ತು. ಹೆತ್ತವರ ಲಾಲನೆ ಪಾಲನೆಯಿಂದ ಬೆಳವಣಿಗೆ ಕಂಡ ಮಗ ಇಸ್ಮಾಯಿಲ್ ಬಾಲ್ಯವನ್ನು ತಲುಪಿದರು. ಆ ಧಾರಾಳ ಖುಷಿಯ ನಡುವೆ “ಯಾ ಇಬ್ರಾಹಿಂ, ನಿಮಗೆ ನೀಡಲಾಗಿರುವ ಮಗುವನ್ನು ನನಗಾಗಿ ಬಲಿ ಅರ್ಪಿಸಬೇಕು” ಸೃಷ್ಟಿಕರ್ತನ ಕಲ್ಪನೆಯಾಯಿತು.
ಕೇಳಿಸಿಕೊಂಡ ಇಬ್ರಾಹಿಂ ಕಿಂಚಿತ್ತು ಯೋಚಿಸಿಲ್ಲ.
ಅಲ್ಲಾಹನ ಮೇಲಿನ ಅದಮ್ಯ ಪ್ರೀತಿ, ಭರವಸೆ.
ಮಗನಾದ ಇಸ್ಮಾಯಿಲರನ್ನು ಬಲಿ ಅರ್ಪಿಸಲು ತಯಾರಾಗುತ್ತಾರೆ. ತನ್ನ ಕರುಳಕುಡಿಯನ್ನು ಅಲ್ಲಾಹನ ದಾರಿಗೆ ಸಮರ್ಪಿಸಲು ಹೊರಟ ಪತಿಯ ಹೆಜ್ಜೆಗಳಿಗೆ ತಡೆಯಾಗದೆ, ಅಲ್ಲಾಹನ ಕಲ್ಪನೆಗೆ ಪ್ರಾಮುಖ್ಯತೆಯನ್ನು ಕಲ್ಪಿಸಿದ ತಾಯಿಯ ಸಮ್ಮತಿಯೂ. ಇಬ್ರಾಹಿಂ ಹರಿತವಾದ ಕತ್ತಿಯೊಂದಿಗೆ ಅಲ್ಲಾಹನ ಆಜ್ಞೆಯ ಈಡೇರಿಕೆಗಾಗಿ ಮಗನಾದ ಇಸ್ಮಾಯಿಲರನ್ನು ಕರೆದೊಯ್ಯುತ್ತಿರುವಾಗ ತಂದೆ ಮಗನ ದಾರಿ ಕಾಯುತ್ತಿದ್ದ ಶೈತಾನ್ ಇಸ್ಮಾಯಿಲರನ್ನು ದಾರಿ ತಪ್ಪಿಸಲು ಕಾಯುತ್ತಿದ್ದ. ಅದನ್ನು ಮನಗಂಡ ಮಗ ಇಸ್ಮಾಯಿಲ್ “ಓ ಶೈತಾನ್ ನಿನ್ನ ಷಡ್ಯಂತ್ರಗಳು ನನ್ನ ಮುಂದೆ ನಡೆಯಲ್ಲ, ನನ್ನ ಸೃಷ್ಟಿಕರ್ತನಾದ ಅಲ್ಲಾಹನ ಇಚ್ಛೆಯೇ ನನ್ನ ಮತ್ತು ನನ್ನ ಹೆತ್ತವರ ಇಚ್ಛೆ” ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಶೈತಾನ್ ದಿಕ್ಕು ತೋಚದೆ ಜಾಗ ಖಾಲಿ ಮಾಡಿದ. ತಂದೆ ಮಗನ ಲಕ್ಷ್ಯ ಸ್ಥಳವು ತಲುಪಿದವು.
ಮಗನ ಮುಖವನ್ನು ಭೂಮಿಯ ಕೆಳ ಭಾಗಕ್ಕೆ ಮಾಡಿ ಕುತ್ತಿಗೆಯ ಮೇಲೆ ತಂದೆ ಇಬ್ರಾಹಿಂ ಹರಿತವಾದ ಕತ್ತಿಯನ್ನಿಟ್ಟು ಅಲ್ಲಾಹನ ಹೆಸರಿನಲ್ಲಿ ಕೊಯ್ಯಲು ಶುರು ಮಾಡಿದರೆ ಹರಿತವಾಗಿದ್ದ ಕತ್ತಿಯು ಮೂರ್ಛೆಯನ್ನೇ ಕಳೆದುಕೊಂಡಿತು.
ಆ ಕ್ಷಣ ಆಕಾಶದಿಂದ ಅಶರೀರವಾಣಿ “ಖಲೀಲುಲ್ಲಾಹಿ ಯಾ ಇಬ್ರಾಹಿಂ” ನೀನು ಗೆದ್ದುಬಿಟ್ಟೆ. ನನ್ನ ಎಲ್ಲಾ ಪರೀಕ್ಷೆಗಳಲ್ಲಿ ನೀನು ಜಯಶೀಲನಾದೆ. ನೀನು ನನ್ನ ಗೆಳೆಯನಾದೆ ಎಂಬ ಗೌರವ ನಾಮದಿಂದ ಅಲ್ಲಾಹನು ಇಬ್ರಾಹಿಮರ ತ್ಯಾಗವನ್ನು ಸ್ಮರಿಸುತ್ತಾನೆ. ಕ್ಷಣಾರ್ಧದಲ್ಲಿ ಆಕಾಶದಿಂದ ಅಲ್ಲಾಹನ ಸೇವಕರು ಒಂದು ಕುರಿಯನ್ನು ತಂದುಕೊಡುತ್ತಾರೆ. ನಂತರ ಅಲ್ಲಾಹನು ಮಗನ ಸ್ಥಾನದಲ್ಲಿ ಅದನ್ನು ಬಲಿಯ ಅರ್ಪಿಸಲು ಕಲ್ಪಿಸುತ್ತಾನೆ. ತಂದೆ ಮತ್ತು ಮಗ ಅಲ್ಲಾಹನಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಅವನ ಸಕಲ ಕೋಟಿ ತೃಪ್ತಿ ಮತ್ತು ಪುಣ್ಯವನ್ನು ಪಡೆದುಕೊಂಡು ಮನೆಗೆ ಹಿಂತಿರುಗುತ್ತಾರೆ. ಈ ತ್ಯಾಗಿ ವಿಧಾನದ ಸ್ಮರಣಾರ್ಥವೇ ಕೋಟ್ಯಾಂತರ ಮುಸಲ್ಮಾನರು ಬಲಿ ಅರ್ಪಿಸುತ್ತಿರುವುದರ ತಾತ್ಪರ್ಯ.
ಹಜ್ಜ್ ಕರ್ಮವು ಇಸ್ಲಾಮಿನ ಪಂಚ ಕರ್ಮಗಳಲ್ಲಿ ಒಂದಾಗಿವೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ದುಲ್ ಹಿಜ್ಜ ತಿಂಗಳ ಪ್ರಾರಂಭದೊಂದಿಗೆ ಹಜ್ಜ್ ಕರ್ಮವು ಆರಂಭವಾಗುತ್ತದೆ. ಹಜ್ಜ್; ದುಲ್ ಹಿಜ್ಜ ಒಂದರಿಂದ ಹತ್ತನೇ ದಿನದವರೆಗೆ ವಿವಿಧ ಕಡೆಗಳಲ್ಲಿ ವಿಭಿನ್ನ ರೀತಿಯ ಆರಾಧನೆಗಳನ್ನು ಮಾಡುವುದಾಗಿದೆ. ಹಜ್ಜ್ ನಿರ್ವಹಿಸಲು ನಿರ್ದಿಷ್ಟವಾದ ತಿಂಗಳು, ದಿನ ಹಾಗೂ ಸಮಯವಿದೆ. ಹಜ್ಜ್ ಹೊರತುಪಡಿಸಿದ ನಮಾಝ್, ಸುನ್ನತ್ ಉಪವಾಸ, ದಾನ ಧರ್ಮ ಹೀಗೆ ಇಸ್ಲಾಂ ಕಲ್ಪಿಸಿರುವ ಯಾವುದೇ ಆರಾಧನೆಗಳನ್ನು ಎಲ್ಲಿ, ಯಾವಾಗ ಬೇಕಾದರೂ ನಿರ್ವಹಿಸಬಹುದು. ಕಡ್ಡಾಯ ಉಪವಾಸ ರಂಝಾನಿನಲ್ಲಾಗಿದೆ.
ದುಲ್ ಹಿಜ್ಜ ತಿಂಗಳ ಒಂಬತ್ತನೇ ದಿನವಾಗಿದೆ ಅರಫಾ ದಿವಸ.
ಹಗಲುಗಳಲ್ಲಿ ಶ್ರೇಷ್ಠವಾದದ್ದು ಅರಫಾ ಹಗಲು. ಮಕ್ಕತ್ತುಶರೀಫಿನಲ್ಲಿ ಗುರುವಾರವಾಗಿತ್ತು ಅರಫಾ ದಿವಸ. ಪರಿಶುದ್ಧವಾದ ಹಜ್ಜ್ ನಿರ್ವಹಿಸಲು ಜಗತ್ತಿನ ವಿವಿಧ ರಾಷ್ಟ್ರಗಳ ಮುಕ್ಕು ಮೂಲೆಗಳಿಂದ ಆಗಮಿಸಿದ ಲಕ್ಷಾಂತರ ಹಜ್ಜಾಜುಗಳು ಕಡ್ಡಾಯವಾಗಿ ಏಕಕಾಲಕ್ಕೆ ಸೇರಬೇಕಾದ ಪುಣ್ಯಭೂಮಿ. ಅರಫಾದಲ್ಲಿ ತಂಗುವುದು ಹಜ್ಜಿನ ಆರಾಧನೆಗಳ ಪೈಕಿ ಮಹತ್ವವಾದ ಕಾರ್ಯವಾಗಿದೆ.
ಕರಿಯ ಬಿಳಿಯ, ಬಡವ ಶ್ರೀಮಂತ, ಅಧಿಕಾರಿ ಅಥವಾ ಸಾಮಾನ್ಯ ಪ್ರಜೆ ಎಂಬ ಭೇದ ಭಾವಗಳಿಲ್ಲದೆ ಅರಫಾ ಮೈದಾನದಲ್ಲಿ ಹಜ್ಜಾಜಿಗಳು ಭಾಗಿಯಾಗುತ್ತಾರೆ, ಭಾಗಿಯಾಗಬೇಕು. ಅಲ್ಲಿ ಸೇರುವ ಸರ್ವರಿಗೂ ಅಲ್ಲಾಹನ ಸಂತೃಪ್ತಿಯೇ ಮುಖ್ಯ. ಇದ್ದವನಿಗೆ ಅಥವಾ ಇಲ್ಲದವನಿಗೆ ಪ್ರತ್ಯೇಕವಾದ ವ್ಯವಸ್ಥೆಗಳಿರುವುದಿಲ್ಲ. ವಿವಿಧ ರಾಷ್ಟ್ರಗಳಿಂದ ಭಾಗವಹಿಸುವ ಪ್ರಧಾನಿಗಳು, ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು ಹಾಗೂ ಜನಸಾಮಾನ್ಯರಿಗೂ ಹಜ್ಜ್ ಕರ್ಮದಲ್ಲೂ ಹಾಗೂ ಅರಫಾ ಮೈದಾನದಲ್ಲಿ ಹೇಳಲಿಕ್ಕಿರುವುದು “ಲಬೈಕ್ಕಲ್ಲಾಹುಮ್ಮ ಲಬೈಕ್ ಲಬೈಕ ಲಾಶರೀಕಲಕ ಲಬೈಕ್, ಇನ್ನಲ್ ಹಂಮ್ದ ವನ್ನಿಅಮತ ಲಕವಲ್ ಮುಲ್ಕ್ ಲಾ ಶರೀಕಲಕ್” ಎಂಬ ಏಕವಿಶ್ವಾಸದ ಮಂತ್ರ ಧ್ವನಿಯೊಂದು ಮಾತ್ರ. ಅರಮನೆಗಳಿಲ್ಲದೆ, ಐಷಾರಾಮಿ ರೂಮುಗಳು, ಎ.ಸಿ,ಮಂಚಗಳು, ಕಂಬಳಿ-ಹೊದಿಕೆಗಳಿಲ್ಲದೆ ಶ್ರೀಮಂತರು, ಬಡವರು, ಮಧ್ಯಮ ವರ್ಗ, ಬಿಳಿಯ-ಕರಿಯ, ಹಿರಿಯ-ಕಿರಿಯ ಎಲ್ಲರೂ ಸಮಾನರಾಗಿ ನಿದ್ರಿಸುವ ಮುಝ್ದಲಿಫದ ರಾತ್ರಿ ಇಸ್ಲಾಮಿನ ಸಹೋದರತೆ, ಭಾತೃತ್ವ, ಸಮಾನತೆ ಹಾಗೂ ಸೌಹಾರ್ದತೆಯ ಸುಂದರ ಚಿತ್ರಣಗಳಾಗಿವೆ. ಹಜ್ಜ್ ಮತ್ತು ಇತರ ಆರಾಧನೆಗಳು ಇಸ್ಲಾಮಿನ ಸಮಾನತೆಯ ಸಂದೇಶಗಳಾಗಿವೆ. ಪವಿತ್ರವಾದ ಇಸ್ಲಾಮಿನಲ್ಲಿ ಅಲ್ಲಾಹನೇ ಸರ್ವ ಶ್ರೇಷ್ಠನು.
ಸೌಹಾರ್ದತೆ ಮತ್ತು ಭಾತೃತ್ವವನ್ನು ಹೆಣೆಯುತ್ತಿರುವ ಇಸ್ಲಾಂ ಮತ್ತು ಇತರ ಧರ್ಮಗಳ ಧಾರ್ಮಿಕ ಹಬ್ಬಗಳಿಂದ ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಯು ಮತ್ತಷ್ಟು ಶ್ರೀಮಂತಗೊಳ್ಳಲಿ. ಹಬ್ಬಗಳು ಮತ್ತು ಧಾರ್ಮಿಕ ಆಚಾರ ವಿಚಾರಗಳಲ್ಲಿ ಭಾಗಿಯಾಗುವ ಮುಸಲ್ಮಾನರು ಇಸ್ಲಾಮಿತರ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆವಹಿಸುವುದನ್ನು ಮರೆಯಬಾರದು. ಮುಸಲ್ಮಾನರ ಧಾರ್ಮಿಕ ಆಚಾರ ವಿಚಾರದೊಂದಿಗೆ ಇಸ್ಲಾಮೇತರ ಸಮುದಾಯದವು ಕೈಜೋಡಿಸಿದಾಗ ಈ ನಾಡು ಶಾಂತಿ ಮತ್ತು ಸೌಹಾರ್ದತೆಗೆ ಮತ್ತಷ್ಟು ಹೆಸರಾಗುತ್ತದೆ. ನಾಡಿನ ಸಮಸ್ತ ಕೋಟಿ ಮಾನವ ಮನಸ್ಸುಗಳಿಗೆ ಈದುಲ್ ಅಳ್’ಹ ಹಬ್ಬದ ಹಾರ್ದಿಕ ಶುಭಾಶಯಗಳು.