ತರಬೇತಿ ವೈದ್ಯೆಯ ಬರ್ಬರ ಹತ್ಯೆ: ತೀವ್ರ ಕಳವಳ ವ್ಯಕ್ತಪಡಿಸಿ ಕಣ್ಣೀರಿಟ್ಟ ಉಪರಾಷ್ಟ್ರಪತಿ

ಕೋಲ್ಕತ್ತಾದ  ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ನೋವಿನ ಘಟನೆ ಎಂದು ಕರೆದ ಧನ್ಕರ್, ಇದು ರಾಷ್ಟ್ರದ ಆತ್ಮಸಾಕ್ಷಿಯನ್ನು ಆಳವಾಗಿ ಅಲುಗಾಡಿಸಿದೆ ಎಂದು ಒತ್ತಿ ಹೇಳಿದ್ದಾರೆ.

 

ಇನ್ನು ಈ ಘಟನೆಯನ್ನು ನಿರ್ಲ್ಯಕ್ಷಿಸಿದ್ದಕ್ಕಾಗಿ ಧನ್ಕರ್ ಕೆಲವು ರಾಜಕೀಯ ವ್ಯಕ್ತಿಗಳನ್ನು ಖಂಡಿಸಿದರು. ಈ ಸೂಕ್ಷ್ಮ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದರು.

 

ಮಾನವೀಯತೆಗೆ ಅವಮಾನ ಆದಾಗ ಕೆಲವು ದಾರಿತಪ್ಪಿದ ಹೇಳಿಕೆಗಳು ನಮ್ಮ ತೀವ್ರ ನೋವನ್ನು ಹೆಚ್ಚಿಸುತ್ತವೆ. ಅವರು ನಮ್ಮ ಸಾಮೂಹಿಕ ಆತ್ಮಸಾಕ್ಷಿಯ ಗಾಯಕ್ಕೆ ಉಪ್ಪು ಸೇರಿಸುತ್ತಿದ್ದಾರೆ ಎಂದು ಧನ್ಕರ್ ಹೇಳಿದರು. ಸಂಸತ್ ಸದಸ್ಯರಾಗಿ ಮತ್ತು ಹಿರಿಯ ವಕೀಲರಾಗಿ ಅವರು ಇಂತಹ ಹೇಳಿಕೆಗಳನ್ನು ನೀಡಬಾರದಾಗಿತ್ತು ಎಂದು ಅವರು ಸಿಬಲ್ ಅವರನ್ನು ಟೀಕಿಸಿದರು. ಇವರು ತಮ್ಮ ಆಲೋಚನೆಗಳನ್ನು ಮರುಪರಿಶೀಲಿಸಬೇಕು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕರೆ ನೀಡಿದ ಉಪರಾಷ್ಟ್ರಪತಿಗಳು, ಇಂತಹ ಘೋರ ಅಪರಾಧಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದರ ವಿರುದ್ಧ ಎಚ್ಚರಿಕೆ ನೀಡಿದರು.